ಜಾತಿ ನಿರ್ಮೂಲನೆಯ ಹಾದಿಯಲಿ ಮಾಯಾವತಿ-ರಘೋತ್ತಮ ಹೊ.ಬ

16/01/2011

ಒಂದಾನೊಂದು ಕಾಲವಿತ್ತು. ಆ ಕಾಲದಲ್ಲಿ ದಲಿತರು ಊರ ಗೌಡರ, ಮತ್ತಿತರ ಮೇಲ್ವರ್ಗದವರ ಮನೆಯ ಮುಂದೆ ಕೂಲಿಗಾಗಿ, ಒಂದೊತ್ತಿನ ತುತ್ತಿಗಾಗಿ ಅಮ್ಮಾ ತಾಯಿ ಎಂದು ಭಿಕ್ಷೆ ಬೇಡಬೇಕಾಗಿತ್ತು. ಅಂದ ಹಾಗೆ ಅಂತಹ ಕಾಲ ಈಗಲೂ ಇದೆ. ಆದರೆ ತುಸು ಬದಲಾಗಿದೆ. ಈ ಬದಲಾದ ಕಾಲಘಟ್ಟದಲ್ಲಿ ದಲಿತರು ಖುರ್ಚಿಯ ಮೇಲೆ ಕುಳಿತಿರುತ್ತಾರೆ. ಇತರರು ಅವರ ಕಾಲು ಸ್ಪರ್ಶಿಸಲು, ಅವರು ನೀಡುವ ಆಜ್ಞೆಯನ್ನು ಪಾಲಿಸಲು ಕ್ಯೂನಲ್ಲಿ ನಿಂತಿರುತ್ತಾರೆ. ಒಟ್ಟಿನಲ್ಲಿ ಎಲ್ಲವೂ ಉಲ್ಟಾ ಪಲ್ಟಾ!. ಅಂದಹಾಗೆ ಅಂತಹ ಉಲ್ಪಾಪಲ್ಟಾ ವ್ಯವಸ್ಥೆಯ ಅಧುನಿಕ ಯುಗದ ಪ್ರತಿನಿಧಿಯಾಗಿ, ಮೇಲ್ವರ್ಗದವರು ಬನ್ನಿ ನನ್ನ ಕಾಲನ್ನು ಸ್ಪರ್ಶಿಸಿ ನಿಮ್ಮ ಪಾಪಗಳಿಗೆ (ಅಸ್ಪಶ್ಯತಾಚರಣೆ) ಪ್ರಾಯಶ್ಚಿತ ಪಡೆದುಕೊಳ್ಳಿ ಎಂದು ರಾಜ ಗಾಂಭೀರ್ಯದಿಂದ ಖುರ್ಚಿಯ ಮೇಲೆ ಕುಳಿತ ವ್ಯಕ್ತಿ ಬೇರಾರು ಅಲ್ಲ. 

ಬೆಹನ್ ಕುಮಾರಿ ಮಾಯಾವತಿ. ಕನ್ನಡದಲ್ಲಿ ಪ್ರೀತಿಯಿಂದ ಹೇಳುವುದಾದರೆ ಅಕ್ಕ ಮಾಯಾವತಿ. ಮಾಯಾವತಿಯವರು ಹುಟ್ಟಿದ್ದು 1956ರ ಜನವರಿ 15ರಂದು. ತಂದೆ ಪ್ರಭುದಾಸ್ ದಯಾಳ್, ತಾಯಿ ರಾಮರತಿ, ಕಾಕತಾಳೀಯವೆಂದರೆ 1956ರ ಆ ವರ್ಷದ ಅಂತ್ಯದಲ್ಲೇ ಅಂದರೆ ಡಿಸೆಂಬರ್ 6ರಂದು ಬಾಬಾಸಾಹೇಬ್ ಅಂಬೇಡ್ಕರ್‌ರವರು ಈ ದೇಶ ವಾಸಿಗಳನ್ನು ಬಿಟ್ಟು ಹೋದದ್ದು, ಆದರೆ ಅವರು ಹೋಗುವುದಕ್ಕೆ ಮುನ್ನವೇ ಓರ್ವ ಧೀರ ಹೆಣ್ಣು ಮಗಳನ್ನು ತಮ್ಮ ಹೋರಾಟದ ರಥವನ್ನು ಎಳೆಯಲು ಈ ದೇಶದ ಮಡಿಲಿಗೆ ಇಟ್ಟು ಹೊರಟು ಹೋಗಿದ್ದರು!. ನಿಶ್ಚಿಂತೆ ಯಿಂದ ಹೇಳಬಹುದು; ಆ ಧೀರ ಹೆಣ್ಣು ಮಗಳು ಮಾಯಾವತಿಯವರಲ್ಲದೆ ಬೇರಾರು ಅಲ್ಲ ಎಂಬುದನ್ನು.

ಯಾಕೆಂದರೆ ಅಂಬೇಡ್ಕರರ ತತ್ವವನ್ನು, ಅವರ ಆಸೆ ಆಕಾಂಕ್ಷೆಗಳನ್ನು ಕ್ಷಣಕ್ಷಣಕ್ಕೂ ಹೆಜ್ಜೆ ಹೆಜ್ಜೆಗೂ ಉತ್ತರ ಪ್ರದೇಶದಲ್ಲಿ ಬಿತ್ತುತ್ತಿರುವ ಅವರು ಒಂದರ್ಥದಲ್ಲಿ ಅದನ್ನು ಅಂಬೇಡ್ಕರ್ ರಾಜ್ಯವನ್ನಾಗಿ ಮಾಡಿದ್ದಾರೆ. ಬಹುಶಃ ಅಂತಹ ದಿನವೊಂದು ಬರುತ್ತದೆ, ನನ್ನ ಚಿಂತನೆಗಳಿಗೆ ಈ ಪರಿಯ ಬೆಲೆ ಸಿಗುತ್ತದೆ, ಎಂದು ಸ್ವತಃ ಬಾಬಾಸಾಹೇಬರು ಕೂಡ ಕನಸು ಕಂಡಿರಲಿಲ್ಲವೋ ಏನೊ? ಮಾಯಾವತಿಯವರು ಆ ಪರಿಯಲ್ಲಿ ಅಂಬೇಡ್ಕರ್‌ರನ್ನು ಉತ್ತರಪ್ರದೇಶದಲ್ಲಿ ಪ್ರತಿಷ್ಠಾಪಿಸಿ ದ್ದಾರೆ. ತನ್ಮೂಲಕ ಇಡೀ ರಾಷ್ಟ್ರಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಎಂದರೆ ಏನು ಎಂದು ತೋರಿಸಿ ಕೊಡುತ್ತಿದ್ದಾರೆ.

ಹಾಗಿದ್ದರೆ ಮಾಯಾವತಿಯವರು ಇಂತಹ ಕೆಲಸವನ್ನು ಯಾವುದೋ ಕಚೇರಿಯಲ್ಲಿ ಕ್ಲರ್ಕ್ ಆಗಿ ಅಥವಾ ಆಫೀಸರ್ ಆಗಿ ಮಾಡಿದರೆ ? ಊಹೂಂ, Infact ಅವರು I.A.S  ಆಫೀಸರ್ ಆಗಬೇಕೆಂದೇ ಗುರಿ ಇಟ್ಟುಕೊಂಡವರು! ಆದರೆ ಆದದ್ದು ಮಾತ್ರ ಸಮಸ್ತ ಒಟ್ಟಾರೆ ಇಡೀ ವ್ಯವಸ್ಥೆಯನ್ನೇ ನಿಯಂತ್ರಿಸಬಲ್ಲಂತಹ ಮುಖ್ಯಮಂತ್ರಿ. ಅದು ಒಂದಲ್ಲ ಎರಡಲ್ಲ, ಬರೋಬ್ಬರಿ ನಾಲ್ಕು ಬಾರಿ! ಅದರಲ್ಲೂ ನಾಲ್ಕನೇ ಬಾರಿಯಂತೂ ಪೂರ್ಣ ಬಹುಮತದೊಂದಿಗೆ. undisputed queen  ಅಂಥಾರಲ್ಲ ಹಾಗೆ. ಆಶ್ಚರ್ಯ, ಯಾವ ಮುಖ್ಯಮಂತ್ರಿ ಪದವಿ ಪಡೆಯಲು ದಲಿತರು ಮೇಲ್ಜಾತಿ ಪಕ್ಷಗಳ ಮುಂದೆ ಕೈ ಕಟ್ಟಿ ನಿಲ್ಲುತ್ತಾರೋ, ಮೇಲ್ವರ್ಗದವರ ಬೂಟು ನೆಕ್ಕುತ್ತಾರೋ ಅಂತಹ ಮುಖ್ಯಮಂತ್ರಿ ಪದವಿಯನ್ನು ದಲಿತ ಹೆಣ್ಣು ಮಗಳೋರ್ವಳು ನಾಲ್ಕು ಬಾರಿ ಪಡೆಯುತ್ತಾಳೆಂದರೆ! ಹಾಗಿದ್ದರೆ ಮಾಯಾವತಿಯವರು ಮೇಲ್ಜಾತಿ ಪಕ್ಷಗಳ ಮುಂದೆ ತಲೆ ಬಗ್ಗಿಸಿ, ಕೈ ಕಟ್ಟಿ ನಿಂತು ಅಂತಹ ಪದವಿ ಪಡೆದರೆ? ಅಥವಾ ಅವರ ಚಮಚಾಗಿರಿ ಮಾಡಲು ತಮ್ಮ ಜೀವನವನ್ನೇ ಸಮರ್ಪಿಸಿದರೇ? ಖಂಡಿತ ಇಲ್ಲ.

ಅವರದೇ ಸ್ವಂತ ಮನೆ ಕಟ್ಟಿಕೊಂಡರು.  ’’Scheduled Caste Federation”  ಎಂಬ ಯಾವ ಸ್ವಂತ ಮನೆಯನ್ನು (ಪಕ್ಷ) ಕಟ್ಟಿ 1950ರ ದಶಕದಲ್ಲಿ ಅಂಬೇಡ್ಕರ್ ‘ಈ ಮನೆಯನ್ನು ನಿಮಗೋಸ್ಕರ ಕಟ್ಟಿದ್ದೇನೆ. ಇದು ಹಾಳಾಗದಂತೆ ಸುಣ್ಣ ಬಣ್ಣ ಬಳಿದು ವ್ಯವಸ್ಥಿತವಾಗಿ ಕಾಪಾಡುವುದು ನಿಮ್ಮ ಜವಾಬ್ದಾರಿ ಎಂದು ಕರೆ ಇತ್ತರೋ, ಕಾನ್ಷೀರಾಂರವರು ಕಟ್ಟಿದ ಅಂತಹದ್ದೇ ಮನೆಯ (ಬಿಎಸ್‌ಪಿ) ಅಧಿಪತಿಯಾಗಿ ಮಾಯಾವತಿ ಉತ್ತರ ಪ್ರದೇಶವೆಂಬ ಈ ದೇಶದ ಬೃಹತ್ ರಾಜ್ಯಕ್ಕೆ ನಾಲ್ಕುಬಾರಿ ಮುಖ್ಯಮಂತ್ರಿ ಯಾದರು. “Political power is the master key” ಎಂಬ ಅಂಬೇಡ್ಕರ್‌ರ ಸುಪ್ರಸಿದ್ಧ ನಾಣ್ನುಡಿಯಂತೆ ರಾಜಕೀಯ ಶಕ್ತಿ ಎಂಬ ಆ ಮಾಸ್ಟರ್‌ಕೀಯನ್ನು ಮಾಯಾವತಿ ನಾಲ್ಕು ಬಾರಿ ಪಡೆದುಕೊಂಡರು. ಅಂದಹಾಗೆ ಮುಂದೊಂದು ದಿನ ಅವರು ಈ ದೇಶದ ಸಂಸತ್ತಿನ ಮಾಸ್ಟರ್ ಕೀ ಯನ್ನು (ಪ್ರಧಾನಿ ಪಟ್ಟ) ಪಡೆದುಕೊಂಡರೂ ಅಚ್ಚರಿ ಏನಿಲ್ಲ.

ಹಾಗಂತ ಮಾಯಾವತಿಯವರಿಗೆ ಅಧಿಕಾರ ಎಂಬ ಮಾಸ್ಟರ್ ಕೀ ದಿಢೀರನೆ ಒಲಿಯಿತೆ? ಅಥವಾ ವಂಶಪಾರಂಪರ್ಯವಾಗಿ ಅವರಿಗೆ ಹಸ್ತಾಂತರ ವಾಯಿತೆ? ಮಾಜಿ ಪ್ರಧಾನಿ ದಿ.ಪಿ.ವಿ.ನರಸಿಂಹ ರಾವ್ ಹೇಳಿದ ಹಾಗೆ ಅದು ಪ್ರಜಾಪ್ರಭುತ್ವದ ಅದ್ಭುತ!. “It is a miracle of democracy” ಹೌದು, ಮಾಯಾವತಿ ಯವರು ರಾಷ್ಟ್ರ ರಾಜಕಾರಣದಲ್ಲಿ ಈ ಪರಿಯ ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಅದ್ಬುತವೇ. ಏಕೆಂದರೆ 1977ರಲ್ಲಿ I.A.S ಗೆ ತಯಾರಿ ನಡೆಸುತ್ತಿದ್ದ ಮಾಯಾವತಿಯವರನ್ನು ಕಾನ್ಷೀರಾಂ ಭೇಟಿ ಮಾಡಿದಾಗ ಅವರಿಗೆ ಕೇವಲ 21 ವರ್ಷ. ಹಾಗಂತ ಮಾಯಾವತಿ ದೊಡ್ಡ ಶ್ರೀಮಂತರ ಮಗಳು, ಅವರಿಂದ ನನ್ನ ಹೋರಾಟಕ್ಕೆ ಆರ್ಥಿಕ ಬಲ ಬರುತ್ತದೆ ಎಂದು ಕಾನ್ಷೀರಾಂರವರು ಮಾಯಾವತಿಯವರನ್ನು ಭೇಟಿ ಯಾಗಲಿಲ್ಲ. ಬದಲಿಗೆ ದೆಹಲಿಯಲ್ಲಿ ನಡೆದ ರ್ಯಾಲಿ ಯೊಂದರಲ್ಲಿ ಆಗಿನ ಕೇಂದ್ರ ಮಂತ್ರಿ ರಾಜ್ ನಾರಾಯಣ್‌ರವರು ದಲಿತರನ್ನು ಹರಿಜನರೆಂದು ಸಂಬೋಧಿಸಿದ್ದಕ್ಕೆ ಪ್ರತಿಯಾಗಿ 21ವರ್ಷದ ಮಾಯಾವತಿ ಎಂಬ ಆ ಶಾಲಾ ಶಿಕ್ಷಕಿ ಉಗ್ರವಾಗಿ ಪ್ರತಿಭಟಿಸಿದ್ದನ್ನು ಕೇಳಿ ಕುತೂಹಲಗೊಂಡು ಕಾನ್ಷೀರಾಂರವರು ಅವರನ್ನು ಭೇಟಿಯಾದರು.

ಕಾನ್ಷೀರಾಂರ BAMCEF (Backward and Minority Community Employees Federation)ನ ಸಕ್ರಿಯ ಸದಸ್ಯರಾಗಿ, 1981ರಲ್ಲಿ ಅವರು ಸ್ಥಾಪಿಸಿದ DS4  (ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ)ಯ ಕಾರ್ಯಕರ್ತರಾಗಿ ಕಾನ್ಷಿರಾಂರ ಜೊತೆ ಸೈಕಲ್‌ನಲ್ಲಿ ಇಡೀ ದೇಶವನ್ನೇ ಸುತ್ತಿದ ಮಾಯಾವತಿಯವರು ಕಾನ್ಷಿರಾಂರ ನೆರಳಾಗಿ, “DRDOದ ಮಾಜಿ ವಿಜ್ಞಾನಿ ನಡೆಸುತ್ತಿದ್ದ ಸಾಮಾಜಿಕ ರಾಜಕೀಯ ಸಂಶೋಧನೆಯ ಸಹಾಯಕರಾಗಿ ಸೇರಿಕೊಂಡರು.

ಮುಂದೆ BAMCEF ಮತ್ತು DS4 mock ಚಳವಳಿಗಳ ಯಶಸ್ಸಿನಿಂದ ಪ್ರೇರಣೆಗೊಂಡ ಕಾನ್ಷೀರಾಂ 1984ರ ಎಪ್ರಿಲ್ 14ರ ಅಂಬೇಡ್ಕರ್ ಜಯಂತಿಯಂದು ಬಹುಜನ ಸಮಾಜ ಪಕ್ಷವನ್ನು (ಬಿಎಸ್‌ಪಿ) ಸ್ಥಾಪಿಸಿದಾಗ ಮಾಯಾವತಿಯವರು ಕಾನ್ಷೀರಾಂರ ಪಕ್ಕ ನಿಂತಿದ್ದರು. ನಿಜ, ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಈ ದೇಶದ ಶೇ 85ರಷ್ಟಿದ್ದಾರೆ. ಅವರು ಬಹುಜನರು. ಉಳಿದ ಮೇಲ್ವರ್ಗದವರು ಶೇ.15ರಷ್ಟಿದ್ದಾರೆ ಅವರು ಮನುವಾದಿಗಳು. ಆದ್ದುದರಿಂದ ನನ್ನದು ಬಹುಜನರನ್ನು ಪ್ರತಿನಿಧಿಸುವ ಪಕ್ಷ ಎಂಬ ಕಾನ್ಷಿರಾಂರ ವೈಜ್ಞಾನಿಕ ರಾಜಕೀಯ ಸಿದ್ಧಾಂತವನ್ನು ಆ ಸಂದರ್ಭದಲ್ಲಿ ಬಹುತೇಕರು ಮಾಡಿರಬಹುದು. ಆದರೆ ಅದು mock ಅಲ್ಲ. Truth ಎಂಬುದನ್ನು ಹೆಜ್ಜೆ ಹೆಜ್ಜೆಗೆ ಸಾಧಿಸುತ್ತಾ ಹೋದವರು ಮಾಯಾವತಿ!

ಅಂತಹ ಸಾಧನೆಯ ಹಾದಿಯಲ್ಲಿ ಅವರು 1984ರ ಡಿಸೆಂಬರ್‌ನಲ್ಲಿ ಪ್ರಪ್ರಥಮವಾಗಿ ಲೋಕಸಭಾ ಚುನಾವಣೆಗೆ ಧುಮುಕಿದಾಗ ಪಡೆದದ್ದು 44,445 ಮತಗಳನ್ನು. ನಂತರ 1985ರ ಬಿಜ್ನೂರ್ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರು ಪಡೆದದ್ದು 61,504 ಮತಗಳನ್ನು. 1987ರ ಮೇ ತಿಂಗಳಿನಲ್ಲಿ ಹರಿದ್ವಾರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಭ್ಯರ್ಥಿಯಾದ ಮಾಯಾವತಿ 1,25,399 ಮತಗಳನ್ನು ಪಡೆದರು. ಹಾಗೆಯೇ ಆ ಚುನಾವಣೆಯಲ್ಲಿ 2ನೆ ಸ್ಥಾನ ಪಡೆದು ಕಾಂಗ್ರೆಸ್ಸಿಗೆ ನಡುಕ ಹುಟ್ಟಿಸಿದ ಅವರು, ಅಂತಹ ನಡುಕವನ್ನು ಕಾಂಗ್ರೆಸ್ ನಿರಂತರ ಅನುಭವಿಸುವಂತೆ ಮಾಡಿದ್ದು ಪ್ರಜಾಪ್ರಭುತ್ವದ ವ್ಯಂಗ್ಯವೆನ್ನದೆ ವಿಧಿಯಿಲ್ಲ!

1989 ಬಿಜ್ನೂರ್ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಶ್ರಮವಹಿಸಿದ ಮಾಯಾವತಿ 1,83,189 ಮತಗಳನ್ನು ಪಡೆದು ದಿಗ್ವಿಜಯಿಯಾದರು. ತನ್ಮೂಲಕ ತಾವು ಪ್ರಜಾಪ್ರಭುತ್ವದ ಅದ್ಭುತ ಎಂಬ ವಿಶೇಷಣಕ್ಕೆ ಸಾಕ್ಷಿಯಾದರು. ಒಂದಂತು ನಿಜ, ಮಾಯಾವತಿ ಹೀಗೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದಂತೆ ಕಾಂಗ್ರೆಸ್ ಎಂಬ ಹುಸಿ ಜಾತ್ಯಾತೀತ ವಾದಿಯ ಬುಡ ಅಲುಗಾಡುತ್ತಾ ಹೋಯಿತು.

ರಾಜಕೀಯ ಅಧಿಕಾರದ ಮಹತ್ವ ಗೊತ್ತಿಲ್ಲದ ಜನಸಮೂಹವನ್ನು ಯಾವ ಕಾಂಗ್ರೆಸ್ ದಶಕಗಳಿಂದ ಮೋಸಗೊಳಿಸಿತ್ತೋ ಅಂತಹ ಮೋಸವನ್ನು ಬಯಲುಗೊಳಿಸುತ್ತಾ ಮಾಯಾವತಿ ಮುನ್ನುಗ್ಗ ತೊಡಗಿದರು. ನಡುವೆ ಅವರ ಈ ಮುನ್ನುಗುವಿಕೆಗೆ ಯಾರೂ ತಡೆಯೊಡ್ಡಲಿಲ್ಲವೆ ? ಅಥವಾ ಪುರುಷ ಪ್ರಧಾನ ರಾಜಕಾರಣದಲ್ಲಿ ಮಹಿಳೆಯೋರ್ವಳನ್ನು ಹೀಗೆ ಬೆಳೆಯಲು ಎಲ್ಲರೂ ಬಿಟ್ಟರೆ ? ಬಿಡುವುದೆಂತು ಬಂತು. 1984ರಲ್ಲಿ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಹೇಗೆ ಅವರ ಸ್ವಂತ ಅಂಗರಕ್ಷಕ ಪಡೆಯವರೆ ಹೊಡೆದುಕೊಂದರೋ ಅದೇ ರೀತಿ ಜೂನ್ 2, 1995ರಂದು ಮಾಯಾವತಿಯನ್ನು ಕೊಲ್ಲುವ ಕ್ರೂರ ಪ್ರಯತ್ನ ನಡೆಯಿತು.

ಲಕ್ನೋ ಗೆಸ್ಟ್ ಹೌಸ್ ಪ್ರಕರಣ ಎಂಬ ಕುಪ್ರಸಿದ್ಧ ಆ ಪ್ರಕರಣದಲ್ಲಿ ಮಾಯಾವತಿ ಬದುಕಿದ್ದೇ ಹೆಚ್ಚು ! ಏಕೆಂದರೆ ಸುಮಾರು 200ಕ್ಕೂ ಹೆಚ್ಚಿದ್ದ ಶಸ್ತ್ರ ಸಜ್ಜಿತ ಗೂಂಡಾಗಳು ಲಕ್ನೋ ಗೆಸ್ಟ್ ಹೌಸ್‌ನತ್ತ ನುಗ್ಗಿ, ಶಾಸಕರ ಸಭೆ ನಡೆಸುತ್ತಿದ್ದ ಮಾಯಾವತಿ ಮತ್ತವರ ಬೆಂಬಲಿಗರ ಮೇಲೆ ಮುಗಿ ಬಿದ್ದಿತು. ಚಮ್ಮಾರರಿಗೆ ಕೊಬ್ಬುಬಂದಿದೆ. ಅವರಿಗೆ ಇಂದು ಪಾಠಕಲಿಸುತ್ತೇವೆ ಎಂದು ಚಾಕು, ಚೂರಿ, ಇತ್ಯಾದಿ ಹರಿತವಾದ ಆಯುಧಗಳೊಂದಿಗೆ ನುಗ್ಗಿದ ಆ ಗುಂಪು.

ಮಾಯಾವತಿಯವರನ್ನು ಹೊರಗೆಳೆಯಿರೋ.. .. . ಕೊಲ್ಲಿರೋ. .. . ಎಂದು ಅಬ್ಬರಿಸುತ್ತಾ ಅಶ್ಲೀಲ ಪದಗಳಿಂದ ಅವರನ್ನು ನಿಂದಿಸುತ್ತಾ ಹಲ್ಲೆ ಮಾಡಲು ಮುಂದಾಯಿತು. ವಿಜಯ್ ಭೂಷಣ್ ಮತ್ತು ಸುಭಾಷ್‌ಸಿಂಗ್ ಬಾದಲ್ ಎಂಬ ಇಬ್ಬರು ಕಿರಿಯ ಪೊಲೀಸ್ ಅಧಿಕಾರಿಗಳು ಧೈರ್ಯ ಹಾಗೂ ಸಾಹಸದಿಂದ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಆ ದಿನ ಆ ವಿಚ್ಛಿದ್ರಕಾರಿ ಗುಂಪನ್ನು ಚದುರಿಸದೇ ಹೋಗಿದ್ದರೆ ಮಾಯಾವತಿ ಎಂಬ ಪ್ರಜಾಪ್ರಭುತ್ವದ ಆ ಅದ್ಭುತ ಖಂಡಿತ ಇಂದು ನಮ್ಮ ಮುಂದೆ ಇರುತ್ತಿರಲಿಲ್ಲ… ಈ ದೇಶದ ಕೋಟ್ಯಂತರ ಶೋಷಿತರ ಆಶೀರ್ವಾದ, ಸಂಕಷ್ಟದ ಕ್ಷಣಗಳನ್ನು ಮೆಟ್ಟಿ ನಿಲ್ಲುವ ತಮ್ಮ will power  ನಿಂದಾಗಿ ಮಾಯಾವತಿ ಬದುಕುಳಿದರು. ಅವರ ಜೀವನವನ್ನೇ ಪರೀಕ್ಷೆಗೆ ಒಡ್ಡಿದ ಆ ಘಟನೆ ಅವರನ್ನು ಒಂದರ್ಥದಲ್ಲಿ ಉಕ್ಕಿನ ಮಹಿಳೆಯನ್ನಾಗಿಸಿತು.

ಘಟನೆಯ ನಂತರ ತಮ್ಮ ಜೀವನದಲ್ಲಿ ಮತ್ತೆ ಅವರು ಹಿಂದಿರುಗಿ ನೋಡಲಿಲ್ಲ. ಏಕೆಂದರೆ ಘಟನೆಯ ಮಾರನೆಯ ದಿನವೇ ಅಂದರೆ ಜೂನ್ 3, 1995ರಂದು ಈ ದೇಶದ ಕೋಟ್ಯಂತರ ಬಹುಜನರು ಶತ ಶತಮಾನಗಳಿಂದ ಏನು ಬಯಸಿದ್ದರೊ ಅದು ನಡೆದು ಹೋಗಿತ್ತು ! ಮಾಯಾವತಿ ಎಂಬ ದಲಿತ ಹೆಣ್ಣು ಮಗಳು ಉತ್ತರ ಪ್ರದೇಶ ಎಂಬ ಆ ಬೃಹತ್ ರಾಜ್ಯದ, ತನ್ಮೂಲಕ ಈ ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಯಾವ political power ಅನ್ನು ಅಂಬೇಡ್ಕರ್ Master key  ಎಂದಿದ್ದರೋ ಅಂತಹ ಮಾಸ್ಟರ್‌ಕೀಯನ್ನು ಮಾಯಾವತಿ ತಮ್ಮ ಕೈಗೆ ತೆಗೆದುಕೊಂಡಿದ್ದರು.

 

ಹಾಗಿದ್ದರೆ ತಮ್ಮ ಪ್ರಥಮ ಅವಧಿಯಲ್ಲಿ ಮಾಯವತಿಯವರು ಏನು ಮಾಡಿದರು? ಒಂದಷ್ಟನ್ನು ಉಲ್ಲೇಖಿಸುವುದಾದರೆ, ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದ 1,45,000 ರೌಡಿಗಳನ್ನು ಬಂಧಿಸಿದರು. ಮುಸಲ್ಮಾನರಿಗೆ ಉದ್ಯೋಗದಲ್ಲಿ ಶೇ.8.44ರಷ್ಟು ಮೀಸಲಾತಿ ನೀಡಿ ಅವರನ್ನು ಓಬಿಸಿ ಪಟ್ಟಿಗೆ ಸೇರಿಸಿದರು. ಮಥುರಾದ ಶ್ರೀಕೃಷ್ಣನ ದೇವಸ್ಥಾನದ ಪಕ್ಕದಲ್ಲಿದ್ದ ಮಸೀದಿಯನ್ನು ಒಡೆಯುವ ವಿಶ್ವಹಿಂದೂಪರಿಷತ್ತಿನ ಪ್ರಯತ್ನವನ್ನು ನಿರ್ದಾಕ್ಷಿಣ್ಯ ವಾಗಿ ವಿಫಲಗೊಳಿಸಿದ ಅವರು ಹಿಂದೂ ಧರ್ಮದ ವಿರುದ್ಧ ತಮ್ಮ ಜೀವನದುದ್ದಕ್ಕೂ ಕತ್ತಿ ಝಳಪಿಸಿದ ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ನಾಯಕರ್‌ರ ನೆನಪಿನಲ್ಲಿ ಒಂದು ವಾರಗಳ ಕಾಲ ರಾಜ್ಯಾದ್ಯಂತ ಪೆರಿಯಾರ್ ಮೇಳ ನಡೆಸಿದರು. 

ಪರಿಣಾಮವಾಗಿ ತಮ್ಮ ಸರಕಾರವನ್ನೇ ಕಳೆದುಕೊಂಡರು. ಆಶ್ಚರ್ಯ ಬೇಡ, ಮರು ವರ್ಷ ನಡೆದ ಚುನಾವಣೆಯಲ್ಲಿ 67 ಸ್ಥಾನ ಪಡೆದ ಮಾಯವತಿಯವರು ಮತ್ತೆ ಬಿಜೆಪಿಯ ಬೆಂಬಲದಿಂದ ಮುಖ್ಯಮಂತ್ರಿ ಯಾದರು. ಅದು 6 ತಿಂಗಳ ಮಟ್ಟಿಗೆ. ಈ ಸಂದರ್ಭದಲ್ಲಿನ ಅವರ ಸಾಧನೆ ಒಂದೇ ಪದದಲ್ಲಿ ಹೇಳುವುದಾದರೆ ಅಪೂರ್ವವಾದುದು. ಆರು ವರ್ಷಗಳ ಸಾಧನೆ ಯನ್ನು ಕೇವಲ ಆರೇ ತಿಂಗಳಲ್ಲಿ ಮಾಡಿದರು ಎಂದರೂ ಅತಿಶಯೋಕ್ತಿಯೇನಲ್ಲ. ಏಕೆಂದರೆ ಆರು ತಿಂಗಳ ಆ ಅವಧಿಯಲ್ಲಿ ಭೂ ಹೀನ ಕೂಲಿ ಕಾರ್ಮಿಕರಿಗೆ ವಿಶೇಷವಾಗಿ ದಲಿತರಿಗೆ 7.5ಲಕ್ಷ ಎಕರೆ ಭೂಮಿ ವಿತರಿಸಿದರು. ದಲಿತರ 60,000 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿಮಾಡಿದರು. ಆರೇ ತಿಂಗಳಲ್ಲಿ ರಾಜ್ಯಾದ್ಯಂತ 15,000 ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಿ ಉತ್ತರಪ್ರದೇಶ ವನ್ನು ಅಂಬೇಡ್ಕರ್ ರಾಜ್ಯ ಮಾಡುವ ತಮ್ಮ ಕನಸಿಗೆ ಅಡಿಗಲ್ಲು ಇಟ್ಟರು.

ತಮ್ಮ ಆರು ತಿಂಗಳ 2ನೇ ಅವಧಿಯ ಆಡಳಿತದ ನಂತರ ಮಾಯಾವತಿಯವರು ಮತ್ತೊಮ್ಮೆ ಮುಖ್ಯಮಂತ್ರಿಯಾದುದ್ದು 2002 ಮಾರ್ಚ್ ತಿಂಗಳಿನಲ್ಲಿ; ಮತ್ತೆ ಅದೇ ಬಿಜೆಪಿಯ ಬೆಂಬಲ ದೊಂದಿಗೆ. ಈ ಬಾರಿಯ ಅವರ ಭವ್ಯ ಸಾಧನೆ ಎಂದರೆ ಪ್ರತಾಪಗಢದ ಸ್ವಘೋಷಿತ ರಾಜ, ರಾಜಾಬೈಯ ಅಲಿಯಾಸ್ ರಘುರಾಜ್ ಪ್ರತಾಪ್‌ಸಿಂಗ್‌ನನ್ನು ಮಟ್ಟಹಾಕಿದ್ದು. ಥೇಟ್ ಹಿಂದೀ ಸಿನಿಮಾಗಳ ಶೈಲಿಯಲ್ಲಿ ಕೊಲೆ, ಸುಲಿಗೆ, ದರೋಡೆಯನ್ನೇ  ಮಾಡಿಕೊಂಡಿದ್ದ, ಇಡೀ ಪ್ರತಾಪಗಡ ಜಿಲ್ಲ್ಲೆಯನ್ನೇ ಭಯದ ಕೂಪಕ್ಕೆ ತಳ್ಳಿದ್ದ ರಾಜಾಬೈಯನನ್ನು ಕೆಣಕುವ ಸಹಾಸಕ್ಕೆ ಹಿಂದಿನ ಯಾವ ಮುಖ್ಯಮಂತ್ರಿಗಳು ಕೈ ಹಾಕಿರಲಿಲ್ಲ. ಅದರೆ ಅವನನ್ನು ಪೋಟಾ ಕಾಯ್ದೆಯಡಿಯಲ್ಲಿ ಬಂಧಿಸಿದ ಮಾಯಾವತಿಯವರು ಅವನ 11,000 ಎಕರೆ ಭೂಮಿಯನ್ನು ವಶಕ್ಕೆ ತೆಗೆದುಕೊಂಡರು. ಅಲ್ಲದೆ ಆತ ಸ್ವತಃ ನಿರ್ಮಿಸಿಕೊಂಡಿದ್ದ ಬೃಹತ್ ಸರೋವರ ಮಾದರಿಯ ಉದ್ಯಾನವನವನ್ನು ವಶಪಡಿಸಿಕೊಂಡು ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಪಕ್ಷಿಧಾಮ ಎಂದು ಹೆಸರಿಟ್ಟರು! ಈ ಘಟನೆಯ ಮೂಲಕ ಉಕ್ಕಿನ ಮಹಿಳೆ ಇಡೀ ಜಗತ್ತಿಗೆ ತನ್ನ ನೈಜ ಉಗ್ರ ರೂಪ ತೋರಿದ್ದರು.

ದೌರ್ಜನ್ಯಕೋರರಿಗೆ ತನ್ನ ರಾಜ್ಯದಲ್ಲಿ ಯಾವ ರೀತಿ ಮರ್ಯಾದೆ ಸಿಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಇಡೀ ದೇಶಕ್ಕೆ ಸಾರಿದ್ದರು. ಅಂದಹಾಗೆ ಒಬ್ಬ ರಾಜಬೈಯನನ್ನು ಹೀಗೆ ಮಟ್ಟ ಹಾಕಿದ ಮೇಲೆ ಅದೆಷ್ಟು ಶೋಷಕ ಪುಡಿ ರಾಜಬೈಯಗಳ ತೊಡೆ ನಡುಗಿರಬೇಡ? ಮಾಯಾವತಿಯವರನ್ನು ಎನ್ನುವುದು ಈ ಕಾರಣಕ್ಕೇ!

formulasocial engineering   formula ನಡುವೆ ತಾಜ್ ಕಾರಿಡಾರ್ ಹಗರಣದ ಕಾರಣದಿಂದಾಗಿ ಅಧಿಕಾರ ಕಳೆದುಕೊಂಡರೂ ಮಾಯಾವತಿ ಒದಗಿ ಬಂದ ಕಷ್ಟಗಳಿಗೆ ಎದೆಗುಂದಲಿಲ್ಲ. ಇಂತಹ ಕಷ್ಟಕಾಲದಲ್ಲಿಯೇ ತಮ್ಮ ಪ್ರೀತಿಯ ಗುರು ಮಾರ್ಗದಾತ, ಬಾಬಾಸಾಹೇಬ್ ಅಂಬೇಡ್ಕರ್ ರವರ ನಂತರ ಶೋಷಿತರ ಅಶಾಕಿರಣವಾಗಿ ಮೂಡಿಬಂದಿದ್ದ ದಾದಾಸಾಹೇಬ್ ಕಾನ್ಷಿರಾಂರ ಕಳೆದುಕೊಂಡ ಮಾಯವತಿ ಒಂದರ್ಥದಲ್ಲಿ ಅನಾಥರಾದರು. ಆದರೆ ಮಾಯಾವತಿ ಆ ಅನಾಥ ಮನಸ್ಥಿತಿಯಲ್ಲಿ ಹೆಚ್ಚು ದಿನ ಇರುವ ಹಾಗಿರಲಿಲ್ಲ. ಏಕೆಂದರೆ ಕಾನ್ಷಿರಾಂ ಅವರ ಮೇಲೆ ಹೊರಿಸಿದ್ದ ಜವಾಬ್ದಾರಿ ಅಂತಹದ್ದಾಗಿತ್ತು. ಪದೇ ಪದೇ ಅಲ್ಪಮತ ಪಡೆದು ಬಿಜೆಪಿ ಬೆಂಬಲದಿಂದ ಅಧಿಕಾರ ನಡೆಸುತ್ತಿದ್ದರ ಬಗ್ಗೆ ರೋಸಿ ಹೋಗಿದ್ದ ಅವರು ಪೂರ್ಣ ಬಹುಮತ ಪಡೆಯುವುದು ಹೇಗೆ ಎನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಅದಕ್ಕಾಗಿ ತಮ್ಮ ಬಹುಕಾಲದ ಬಹುಜನ ಸಮಾಜ ಸಿದ್ಧಾಂತವನ್ನು ಬದಲಿಸಿ ಸರ್ವಜನ ಸಮಾಜ ಸಿದ್ದಾಂತವನ್ನು ಚಾಲನೆಗೆ ತಂದರು.

ಈ ಸಂದರ್ಭದಲ್ಲಿ ಅವರ ಜೊತೆಯಾದರವರೆಂದರೆ ನಿವೃತ್ತ ನ್ಯಾಯಾಧೀಶರೋರ್ವರ ಮಗನಾದ ಬ್ರಾಹ್ಮಣ ಸಮಾಜಕ್ಕೆ ಸೇರಿದ ಸತೀಶ್ ಚಂದ್ರ ಮಿಶ್ರ. ಯಾವ ಎರಡು ಧ್ರುವಗಳು ಸಮಾಜದಲ್ಲಿ ಪರಸ್ಪರ ವಿರುದ್ದ ದಿಕ್ಕಿನಲ್ಲಿವೆಯೋ ಅಂತಹ ಎರಡು ಧ್ರುವಗಳನ್ನು ಅಂದರೆ ದಲಿತರು ಮತ್ತು ಬ್ರಾಹ್ಮಣರನ್ನು ರಾಜಕೀಯವಾಗಿ ಒಂದು ಗೂಡಿಸುವ, ಆ ಮೂಲಕ ಬಹುಮತ ಪಡೆಯುವ ವಿಚಿತ್ರ ವನ್ನು ಪ್ರಯೋಗಿಸಿತು ಮಾಯಾ-ಮಿಶ್ರ ಜೋಡಿ. ಇದಕ್ಕೆ ಅವರು ಕರೆದಿದ್ದು ಎಂದು! ಆಶ್ಚರ್ಯ! ಮಾಯಾವತಿ ಮತ್ತು ಸತೀಶ್ ಚಂದ್ರ ಮಿಶ್ರರ ಈ ಫಲನೀಡಿತ್ತು.

social engineering ದಲಿತ, ಬ್ರಾಹ್ಮಣರ ಜೊತೆ ನಸೀಮುದ್ದೀನ್ ಸಿದ್ದೀಕಿಯವರ ನೇತೃತ್ವದಲ್ಲಿ ಮುಸ್ಲಿಂ ಜನರ ಬೆಂಬಲ ಪಡೆದ ಮಾಯಾವತಿಯವರು 2007ರ ಮೇ ತಿಂಗಳಿನಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಪಡೆದು ಪೂರ್ಣ ಬಹುಮತ ಪಡೆದರು! ಕಾನ್ಷೀರಾಂ ಎಂಬ ಸಾಮಾಜಿಕ ವಿಜ್ಞಾನಿಯ ಶಿಷ್ಯೆ ನಡೆಸಿದ ಈ ನ ಪ್ರಯೋಗ ಅದ್ಭುತ ಫಲನೀಡಿತ್ತು. 206 ಸದಸ್ಯರ ಸರಳ ಬಹುಮತದೊಂದಿಗೆ ಮಾಯಾವತಿ ಯವರು ನಾಲ್ಕನೇ ಬಾರಿಗೆ ಉತತಿರ ಪ್ರದೇಶದ ಮುಖ್ಯಮಂತ್ರಿಯಾದರು. ಒಂದಂತೂ ನಿಜ. ಯಾವ ರಾಜಕೀಯ ಅಧಿಕಾರಕ್ಕಾಗಿ ಶೋಷಿತರು ಅನ್ಯ ಪಕ್ಷಗಳ ಬಾಗಿಲಲ್ಲಿ ನಿಂತು ಗುಲಾಮಗಿರಿ ಮಾಡು ತ್ತಾರೋ, ಹಲ್ಲುಗಿಂಜಿ ನೆಲಕೆರೆಯುತ್ತಾರೋ ಅಂತಹ ಸ್ವಾಭೀಮಾನ ರಹಿತ ದಲಿತ ರಾಜಕಾರಣಿಗಳಿಗೆ ಮಾಯಾವತಿಯವರು ಅಂಬೇಡ್ಕರ್‌ರವರ ಮಾರ್ಗದಲ್ಲಿ ಸ್ವಾಭಿಮಾನ ಪೂರ್ವಕವಾಗಿ ಅಧಿಕಾರ ಪಡೆಯುವುದು ಹೇಗೆಂದು ತೋರಿಸಿಕೊಟ್ಟರು. ಶೋಷಕ ಸಮುದಾಯಗಳನ್ನು ಮಟ್ಟಹಾಕುವುದು ಹೇಗೆ ಅಥವಾ ಆ ಶೋಷಕ ಸಮುದಾಯಗಳನ್ನು ನಮ್ಮ ದಾರಿಗೆ ತರುವುದು ಹೇಗೆ ಎಂಬುದರ ಬಗ್ಗೆ ಇಡೀ ದಲಿತ ಸಮುದಾಯಕ್ಕೆ ಪಾಠ ಹೇಳಿಕೊಟ್ಟರು.

intermediate ಇಂದು ಉತ್ತರ ಪ್ರದೇಶದಲ್ಲಿ ಶೇ.10ರಷ್ಟಿರುವ ಬ್ರಾಹ್ಮಣರು ಮಾಯಾವತಿಯವರಲ್ಲಿ ರಕ್ಷಣೆ ಪಡೆದಿದ್ದಾರೆ. ಅವರ ಬೆಂಬಲಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಅಂತಹದ್ದೇ ಘಟನೆ ದೇಶಾದ್ಯಂತ ನಡೆದರೆ? ಬ್ರಾಹ್ಮಣರೇ ದಲಿತರ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಸಂದೇಶ ಇಡೀ ದೇಶಕ್ಕೆ ಸಾರಲ್ಪಟ್ಟರೆ? ಖಂಡಿತ ಅಲ್ಲಿ ಸಡಿಲವಾಗುವುದು ಜಾತಿ ವ್ಯವಸ್ಥೆ. ಜಾತಿ ವ್ಯವಸ್ಥೆಯ ಸೃಷ್ಟಿಕರ್ತರು ಮತ್ತು ಜಾತಿ ವ್ಯವಸ್ಥೆಯ ಬಲಿ ಪಶುಗಳು ಒಂದಾಗಿದ್ದಾರೆ ಇನ್ನು ನಮಗೇನು ಕೆಲಸ ಎಂದು ಬ್ರಾಹ್ಮಣ ಮತ್ತು ದಲಿತರ ಮಧ್ಯೆ ಬರುವ ಇತರ ಜಾತಿಗಳಿಗೆ ಖಂಡಿತ ಅನಿಸೇ ಅನಿಸುತ್ತದೆಯಲ್ಲವೆ? ಹಾಗಾದಾಗ ಇಡೀ ದೇಶದಲ್ಲಿ ಜಾತೀಯತೆ ಮುಕ್ತ ಸಮಸಮಾಜ ನಿರ್ಮಾಣ ಖಂಡಿತ ಆಗುತ್ತದೆ.

ಕಡೆಯದಾಗಿ ಹೇಳುವುದಾದರೆ ಅಂಬೇಡ್ಕರರು ಜಾತಿ ನಿರ್ಮೂಲನೆ ಎಂಬ ಕೃತಿ ಬರೆದು ಅದನ್ನು ನಿರ್ಮೂಲನೆ ಮಾಡುವುದು ಹೇಗೆಂದು ಕನಸು ಕಂಡರು. ಕಾನ್ಷೀರಾಂರವರು ಅಂಬೇಡ್ಕರ್ ರವರ ಅ ಕೃತಿಯನ್ನು ಓದಿ ಬಹುಜನ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಚಿಂತಿಸಿದರು. ಅಂಬೇಡ್ಕರ್ ಮತ್ತು ಕಾನ್ಷೀರಾಂರವರ ಚೇತನವನ್ನು ತಮ್ಮ ಹೃದಯದಲ್ಲಿ ಮನಸ್ಸಿನಲ್ಲಿ ತುಂಬಿಕೊಂಡಿರುವ ಮಾಯವತಿಯವರು ಜಾತಿ ನಿರ್ಮೂಲನೆಯ ಈ ನಿಟ್ಟಿನಲ್ಲಿ ಸರ್ವಜನ ಸಮಾಜ, ಆ ಮೂಲಕ ಸಮಸಮಾಜ ನಿರ್ಮಾಣದತ್ತ ಹೊರಟಿದ್ದಾರೆ. ಅಕಸ್ಮಾತ್ ಮಾಯಾವತಿಯವರು ತಮ್ಮ ಈ ಪ್ರಯತ್ನದಲ್ಲಿ ಯಶಸ್ವಿಯಾದರೆ? ಖಂಡಿತ ಈ ದೇಶದಲ್ಲಿ ಅತ್ಯಂತ ಅದ್ಭುತವಾದ ವ್ಯವಸ್ಥೆಯೊಂದು ನಿರ್ಮಾಣವಾಗುತ್ತದೆ. ಅಂತಹ ಅದ್ಭುತ ವ್ಯವಸ್ಥೆಯಲ್ಲಿ ಸಮಬಾಳು, ಸಮಪಾಲು ಎಂಬ ಸಿದ್ದಾಂತ ರಾರಾಜಿಸುತ್ತಿರುತ್ತದೆ. ಅಂಬೇಡ್ಕರರ ಜಾತಿ ನಿರ್ಮೂಲನೆಯ ಕನಸು ನನಸಾಗಿರುತ್ತದೆ.
ಜಾತಿ ನಿರ್ಮೂಲನೆಯ, ಸಮಸಮಾಜ ನಿರ್ಮಾಣದ ಈ ದಿಶೆಯಲ್ಲಿ ಮಾಯಾವತಿಯವರ ಈ ನಡೆ ನಿಜಕ್ಕೂ ಅಪ್ಯಾಯಮಾನವಾದುದಲ್ಲವೆ? ಬನ್ನಿ ಈ ನಿಟ್ಟಿನಲ್ಲಿ ಮಾಯಾವತಿಯವರನ್ನು ಬೆಂಬಲಿಸೋಣ. ಅವರ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ. ಅವರಿಗೆ ಶುಭಾಶಯ ತಿಳಿಸೋಣ.
Wish you happy birthday ಬೆಹನ್ ಜೀ …

:-ರಘೋತ್ತಮ

_____________

http://vbnewsonline.com/JanaJanitha/40613/


ಬಸವಣ್ಣನವರನ್ನು ರಕ್ಷಿಸಿ

02/12/2010

 

-ಬಿ.ಎಲ್.ವೇಣು,ಚಿತ್ರದುರ್ಗ
ಬರಗೂರರು ‘ವಚನ ಚಳವಳಿಯನ್ನು ಶಿವಕೇಂದ್ರಿತ ಚಳವಳಿ’ ಎಂದಿದ್ದಾರೆ. ಆಗ ಧಾರ್ಮಿಕತೆಯ ಪ್ರಭಾವವಿದ್ದ ಕಾಲ. ಬಸವಣ್ಣ, ಅಲ್ಲಮ, ಬುದ್ಧ, ಏಸುಕ್ರಿಸ್ತ ಇವರ ಚಿಂತನೆಗಳು ನಮಗೆ ತಿಳಿದಿವೆ. ಆದರೆ…

ಬಸವಣ್ಣನವರ ಕಾಲದಲ್ಲಿ ಎಲ್ಲವೂ ಆಗಿತ್ತೆ? ಎಂದು ಕೇಳುವ ಮೂಲಕ ನಮ್ಮೆಲ್ಲರನ್ನೂ ವಿಚಾರದ ಒರೆಗಲ್ಲಿಗೆ ಹಚ್ಚಿದ ಬರಗೂರು ರಾಮಚಂದ್ರಪ್ಪ ಅವರಿಗೆ ವಚನಕಾರರನ್ನು ಅಗೌರವಿಸುವ ವಿಚಾರ ಇದ್ದಂತಿಲ್ಲ.  ಬಸವಣ್ಣನವರ ಕಾಲದಲ್ಲೇ ಎಲ್ಲವೂ ಆಗಬೇಕಂತೇನಿಲ್ಲ. ಸರ್ವ ಸಮಾನತೆಯ ಬೀಜ ಬಿತ್ತಿದ ಅವರ ಆಶಯಗಳು ಕಡೆಗಣಿಸುವಂಥವೂ ಅಲ್ಲ. ಗಾಂಧೀಜಿ, ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್ ಅವರು ವಚನ ಚಳುವಳಿಯಿಂದ ಪ್ರೇರೇಪಿತರಾಗಿದ್ದರೆ ಅಷ್ಟರ ಮಟ್ಟಿಗಿನ ಗೆಲುವು ಶರಣರದ್ದಾಗುತ್ತದೆ.

ಗಾಂಧೀಜಿ, ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್ ಅವರ ಕಾಲದಲ್ಲಿ ಎಲ್ಲವೂ ಆಗಿತ್ತೇ? ಗಾಂಧಿ ಅಸ್ಪಶ್ಯತೆ ವಿರುದ್ಧ  ಹೋರಾಡಿದ ಮಾತ್ರಕ್ಕೆ ಅಸ್ಪಶ್ಯತೆ ನಾಶವಾಗಿದೆಯೆ? ಅಂಬೇಡ್ಕರ್ ದಲಿತರ ಶಿಕ್ಷಣಕ್ಕೆ ಸಂವಿಧಾನದಲ್ಲಿ ಹೆಚ್ಚಿನ ಒತ್ತು ನೀಡಿದರು. ಅಂದ ಮಾತ್ರಕ್ಕೆ ದಲಿತರಿಗೆಲ್ಲಾ ಶಿಕ್ಷಣ ದೊರೆತು ಆರ್ಥಿಕ, ಸಾಮಾಜಿಕ ಸಮಾನತೆ ದೊರಕಿದೆಯೇ? ಕಾರ್ಲ್‌ಮಾರ್ಕ್ಸ್ ಹೋರಾಟ ಎಷ್ಟರಮಟ್ಟಿಗೆ ಸುಧಾರಣೆ ತಂದಿದೆ? ಯಾರ ಕಾಲದಲ್ಲೇ ಆಗಲಿ ಎಲ್ಲವೂ ಆಗಿಬಿಡುವ ಸಾಧ್ಯತೆಗಳು ವಿರಳ. ಆದರೆ ಆ ದಿಸೆಯಲ್ಲಿ ಇಷ್ಟಾದರೂ ಪ್ರಯತ್ನಗಳೇ ಆಗಿರದಿದ್ದರೆ ಈ ವೇಳೆಗೆ ನಮ್ಮ ದೇಶ ಇನ್ನೆಂತಹ ಹೀನ ಅವಸ್ಥೆಯಲ್ಲಿ ಇರುತ್ತಿತ್ತೋ? ಕಲ್ಪಿಸಿಕೊಂಡರೇ ನಡುಕ ಹುಟ್ಟುತ್ತದೆ.

ಈ ಹೊತ್ತಿಗೂ ಸನಾತನಿಗಳ ಉಪಟಳ ಕಡಿಮೆಯಾಗಿಲ್ಲ. 12ನೇ ಶತಮಾನದಲ್ಲಿ ಶರಣರು ಜಾತೀಯತೆಯ ವಿರುದ್ಧ ಪ್ರತಿಭಟಿಸಿದರೆ,16ನೇ ಶತಮಾನದಲ್ಲಿ ಹರಿದಾಸರೂ ಜಾತಿ ಮತ, ಮೌಢ್ಯ ಮಡಿ, ಮೈಲಿಗೆಗಳ ಧೋರಣೆಗಳನ್ನು ತಮ್ಮ ಕೀರ್ತನೆಗಳಲ್ಲಿ ಟೀಕಿಸಿದ್ದಾರೆ. ಪಂಪ ಮಾನವ ಕುಲಂ ತಾನೊಂದೆ ವಲಂ’ ಎಂದಿದ್ದಾನೆ. ಕುವೆಂಪು  ‘ಮನುಜ ಮತ, ವಿಶ್ವಪಥ’ ಎಂದರು. ಮನುಷ್ಯರೆಲ್ಲಾ ಒಂದೇ. ಮೇಲು -ಕೀಳು ಎಂಬ ಭೇದ ಮಾಡಿದ್ದು,  ವಿದ್ಯಾದಾನ ಮಾಡದಿದ್ದುದು ಮಹಾಪಾಪ ಎಂಬ  ಪಾಪಪ್ರಜ್ಞೆಯ ಮಾತುಗಳು ಆಯಾ ಕಾಲಘಟ್ಟದಲ್ಲಿ   ಸನಾತನಿಗಳಿಂದಲೂ ಬಂದಿವೆ.

ಬರಗೂರರು ‘ವಚನ ಚಳವಳಿಯನ್ನು ಶಿವಕೇಂದ್ರಿತ ಚಳವಳಿ’ ಎಂದಿದ್ದಾರೆ. ಆಗ ಧಾರ್ಮಿಕತೆಯ ಪ್ರಭಾವವಿದ್ದ ಕಾಲ. ಬಸವಣ್ಣ, ಅಲ್ಲಮ, ಬುದ್ಧ, ಏಸುಕ್ರಿಸ್ತ ಇವರ ಚಿಂತನೆಗಳು ನಮಗೆ ತಿಳಿದಿವೆ. ಆದರೆ, ಅವರು ನಂಬಿದ ದೇವರುಗಳ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ. ವಿವೇಕಾನಂದ  ‘ದರಿದ್ರ ದೇವೋಭವ’ ಅಂದರೆ, ಕುವೆಂಪು  ‘ನೂರು ದೇವರನ್ನೆಲ್ಲ ನೂಕಾಚೆ ದೂರ’ ಅಂದರು. ಇವೆಲ್ಲ ದೈವ ವಿರೋಧಿ ಭಾವಗಳೇ ಅಥವಾ ದೇವರು, ಧರ್ಮದ ಬಗೆಗಿನ ವಿಮರ್ಶೆಗಳೇ?

ಬಸವಣ್ಣ ಎಲ್ಲರಿಗೂ ಇಷ್ಟಲಿಂಗ ಕಟ್ಟುವ ಮೂಲಕ ಸರ್ವ ಸಮಾನತೆಯನ್ನು ತರಲು ಹೆಣಗಿದರೇ ಹೊರತು ಹೊಸತೊಂದು ಜಾತಿರೂಪ ನೀಡಲಿಲ್ಲ. ವೈದಿಕ ಧರ್ಮವನ್ನು ವಿರೋಧಿಸಿ ಜನ್ಮತಳೆದ ವೀರಶೈವ ಧರ್ಮ ತದನಂತರ ವೈದಿಕ ಧರ್ಮದ ನಕಲಿನಂತಾಗಿದ್ದು ವಿಪರ್ಯಾಸ. ಶರಣರನ್ನು ಮಾದಾರ ಚೆನ್ನಯ್ಯ, ಡೋಹರಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಅಂತೆಲ್ಲಾ ಗುರುತಿಸಿದ್ದು ಜಾತಿಯ ನೆಲೆಯಲ್ಲಲ್ಲ. ಕಾಯಕದ ನೆಲೆಯಲ್ಲಿ. ಆ ಕುರಿತು ಗುಮಾನಿ ಪಡುವಂಥದ್ದೇನಿಲ್ಲ.

‘ಕಾಯಕವೇ ಕೈಲಾಸ’ವೆಂದು ಎಲ್ಲ ತೆರನಾದ ಕಾಯಕವನ್ನು ಗೌರವಿಸುತ್ತಾ ‘ಶ್ರಮ ಸಂಸ್ಕತಿ’ಗೆ ಬಸವಣ್ಣ ಹೆಚ್ಚು ಒತ್ತು ಕೊಟ್ಟರೇ ವಿನಾ ಶಿವ ಸಂಸ್ಕತಿಗಲ್ಲ. ಬಸವಣ್ಣನವರದು ಶಿವಕೇಂದ್ರಿತ ಚಳುವಳಿಯಲ್ಲ. ಅದು ವೈದಿಕಶಾಹಿ ವಿರೋಧಿ ಚಳುವಳಿ.

‘ದೇಹವೇ ದೇವಾಲಯ’,‘ಇವನಾರವ ಅನ್ನದೆ ಇವ ನಮ್ಮವ’ನೆಂದು ದಲಿತರನ್ನು ಅಪ್ಪಿ ತಮ್ಮ ಸರಿ ಸಮನಾಗಿ ಕೂರಿಸಿಕೊಂಡರು. ಅಲ್ಲಮನನ್ನು ಎತ್ತರದಲ್ಲೆೀ ಕೂರಿಸಿ ‘ಎನಗಿಂತ ಕಿರಿಯರಿಲ್ಲವಯ್ಯ’ ಅಂದ ಬಸವಣ್ಣನವರನ್ನು ಸಂಶಯಿಸುವ ಯಾರೇ ಆಗಲಿ ಕಿರಿಯರಾಗಿ ಬಿಡುತ್ತಾರಷ್ಟೆ. ಗಾಂಧಿ ಕೇವಲ ಅಸ್ಪಶ್ಯತೆ ನಾಶದ ಕಡೆಗೇ ಕಾಳಜಿ ತೋರಿದರೇ ಹೊರತು ಜಾತಿ ನಾಶದ ಬಗ್ಗೆ ತುಟಿ ಬಿಚ್ಚಲಿಲ್ಲ. ಅವರಿಗೂ ಒಂದು ಮಿತಿ ಇತ್ತು. ಅಂಬೇಡ್ಕರ್ ಹಿಂದೂ ಧರ್ಮದಲ್ಲಿನ  ಜಾತಿ ವ್ಯವಸ್ಥೆಯಿಂದ ಬೇಸತ್ತು ಅದರಿಂದ ಪಾರಾಗಲು ತಾವೇ ಬೌದ್ಧ ಧರ್ಮ ಸ್ವೀಕರಿಸಿದರು. ಹಾಗಂತ ದಲಿತರನ್ನು ನಡುನೀರಲ್ಲಿ ಕೈಬಿಟ್ಟರು ಎನ್ನಲಾದೀತೆ? ಎಲ್ಲಾ ಕೀಳು ಜಾತಿಯ ಜನರನ್ನು ಬಸವಣ್ಣ ಒಂದೆಡೆ ಕಲೆಹಾಕಿ ಅವರ ಭಾವನೆಗಳನ್ನು ಹಂಚಿಕೊಳ್ಳುವ, ಅಚ್ಚ ಕನ್ನಡದಲ್ಲಿ ವಚನಗಳ ಮೂಲಕ ಅಭಿವ್ಯಕ್ತಿಸುವ ಅವಕಾಶ ಕಲ್ಪಿಸಿ, ಮಹಿಳೆಯರನ್ನು ಅಡಿಗೆ ಮನೆಯಿಂದ ಅನುಭವ ಮಂಟಪಕ್ಕೆ ಬರುವ ವಾತಾವರಣ ನಿರ್ಮಿಸಿದರಲ್ಲದೆ, ಕಾಯಕ ಮಾಡಿ ಬದುಕುವವನೇ ಕುಲಜನೆಂದು ಗೌರವಿಸಿ ‘ಕಾಯಕ ಸಂಸ್ಕತಿ’ ಹುಟ್ಟು ಹಾಕಿದ್ದನ್ನು ಸಮಾಜವಾದವೆಂದು ಕರೆಯದೆ ಮತ್ತೇನೆಂದು ಕರೆಯೋಣ? ಕಾರ್ಲ್‌ಮಾರ್ಕ್ಸ್‌ರ ಚಿಂತನೆ ಕೂಡ ಇದಕ್ಕಿಂತ ಬೇರೆಯದೇನಲ್ಲ.

850 ವರ್ಷಗಳ ಹಿಂದೆಯೇ ಮೋಚಿಯ ಮಗನಿಗೆ ವೈದಿಕ ಮಂತ್ರಿಯ ಮಗಳೊಂದಿಗೆ ಮದುವೆ  ಮಾಡಿಸಿ ಜಾತಿ ನಾಶಕ್ಕೆ ಅಂತರ್ಜಾತೀಯ ಮದುವೆಗಳೇ ಬಲವಾದ ಅಸ್ತ್ರವೆಂದು ಸಾರಿದ ಬಸವಣ್ಣನವರ  ತತ್ವಾದರ್ಶಗಳನ್ನು ಅವರ ಅನುಯಾಯಿಗಳು ತಪ್ಪದೆ ಪಾಲಿಸುತ್ತ ಬಂದಿದ್ದರೆ ಈ ವೇಳೆಗೆ ಜಾತಿಗಳು ಇರುತ್ತಿರಲಿಲ್ಲ. ಮೀಸಲಾತಿಯ ಅಗತ್ಯವೂ ಇರುತ್ತಿದ್ದಿಲ್ಲ.

ಆಚಾರಕ್ಕೆ ಆದ್ಯತೆ ಕೊಡದೆ, ವಿಚಾರಕ್ಕೆ ಪ್ರಾಮುಖ್ಯ  ಕೊಟ್ಟ ಬಸವಣ್ಣ ಬಹುಮುಖ್ಯವಾಗಿ ತನ್ನದೇ ಧರ್ಮಿಯರ ವಿರುದ್ಧ ಮೊದಲು ದನಿ ಎತ್ತಿ ವಿರೋಧಿಸಿದರು. ವೈದಿಕಶಾಹಿಗಳ ಎದೆಯಲ್ಲಿ ನಡುಕ ಹುಟ್ಟಿಸಿದರು. ಸಮಾನತೆಯ ಧರ್ಮದ ಪರಿಕಲ್ಪನೆ ತಂದರು. ಅವರು ಈ ದೇಶ ಕಂಡ ಮೊಟ್ಟ ಮೊದಲ ಬಂಡಾಯಗಾರ, ಉಳಿದವರೆಲ್ಲ ಅವರ ನಕಲುಗಳಷ್ಟೇ.

ಬಸವಣ್ಣನವರೆಂದೂ ಈಗಿನ ಬಂಡಾಯಗಾರರಂತೆ ಅವಕಾಶವಾದಿಯಾಗಲಿಲ್ಲ. ಪೀಠ ತೊರೆದರೇ (ಅದೂ ಪ್ರಧಾನಿ ಪೀಠ) ವಿನಾ ಪೀಠಕ್ಕಾಗಿ ಹಪಹಪಿಸಲಿಲ್ಲ.

ಗಾಂಧೀಜಿ, ಅಂಬೇಡ್ಕರ್, ಕಾರ್ಲ್‌ಮಾರ್ಕ್ಸ್ ಅವರಿಗೆ ಇದ್ದ ಆದ್ಯತೆ, ಅವಕಾಶ, ಗುರಿಗಳೇ ಬೇರೆ. ಬಸವಣ್ಣನವರಿಗಿದ್ದ ಅವಕಾಶ, ಗುರಿ, ಆದ್ಯತೆಗಳೇ ಬೇರೆ. ಆದರೂ ಇವರೆಲ್ಲರೂ ಸಮಾನತೆ ತರಲು, ಜಾತಿಯ ಅನಿಷ್ಟ ವ್ಯವಸ್ಥೆಯ ಎದುರು ಹೋರಾಟ ನಡೆಸಿದ ಸಮಾಜವಾದಿಗಳೇ. ಬಸವಣ್ಣನವರ ವಚನಗಳನ್ನು ಪೂರ್ತಿಯಾಗಿ ಉಲ್ಲೇಖಿಸದೆ ಕೆಲವು ಸಾಲುಗಳನ್ನು ಮಾತ್ರ ಹೆಕ್ಕಿಕೊಂಡು ತಮ್ಮ ವಾದಕ್ಕೆ ತಕ್ಕಂತೆ ಬಳಸಿಕೊಂಡು  ಬಸವಣ್ಣನವರನ್ನು ಕಾಣಲು, ನಮಗೆ ತೋರಿಸಲು ಹಾಗೂ ನಮ್ಮನ್ನು ನಂಬಿಸಲು ಪರದಾಡುತ್ತಿರುವ ವಿದ್ವಾಂಸರಿಂದ ಬಸವಣ್ಣನವರನ್ನು ರಕ್ಷಿಸಬೇಕಿದೆ. ಆದರೆ ರಕ್ಷಿಸುವವರು ಯಾರು? 

_________

Courtesy: http://www.prajavani.net/Content/Jul42010/sunday20100703192828.asp