ಜಾತಿ ನಿರ್ಮೂಲನೆಯ ಹಾದಿಯಲಿ ಮಾಯಾವತಿ-ರಘೋತ್ತಮ ಹೊ.ಬ

16/01/2011

ಒಂದಾನೊಂದು ಕಾಲವಿತ್ತು. ಆ ಕಾಲದಲ್ಲಿ ದಲಿತರು ಊರ ಗೌಡರ, ಮತ್ತಿತರ ಮೇಲ್ವರ್ಗದವರ ಮನೆಯ ಮುಂದೆ ಕೂಲಿಗಾಗಿ, ಒಂದೊತ್ತಿನ ತುತ್ತಿಗಾಗಿ ಅಮ್ಮಾ ತಾಯಿ ಎಂದು ಭಿಕ್ಷೆ ಬೇಡಬೇಕಾಗಿತ್ತು. ಅಂದ ಹಾಗೆ ಅಂತಹ ಕಾಲ ಈಗಲೂ ಇದೆ. ಆದರೆ ತುಸು ಬದಲಾಗಿದೆ. ಈ ಬದಲಾದ ಕಾಲಘಟ್ಟದಲ್ಲಿ ದಲಿತರು ಖುರ್ಚಿಯ ಮೇಲೆ ಕುಳಿತಿರುತ್ತಾರೆ. ಇತರರು ಅವರ ಕಾಲು ಸ್ಪರ್ಶಿಸಲು, ಅವರು ನೀಡುವ ಆಜ್ಞೆಯನ್ನು ಪಾಲಿಸಲು ಕ್ಯೂನಲ್ಲಿ ನಿಂತಿರುತ್ತಾರೆ. ಒಟ್ಟಿನಲ್ಲಿ ಎಲ್ಲವೂ ಉಲ್ಟಾ ಪಲ್ಟಾ!. ಅಂದಹಾಗೆ ಅಂತಹ ಉಲ್ಪಾಪಲ್ಟಾ ವ್ಯವಸ್ಥೆಯ ಅಧುನಿಕ ಯುಗದ ಪ್ರತಿನಿಧಿಯಾಗಿ, ಮೇಲ್ವರ್ಗದವರು ಬನ್ನಿ ನನ್ನ ಕಾಲನ್ನು ಸ್ಪರ್ಶಿಸಿ ನಿಮ್ಮ ಪಾಪಗಳಿಗೆ (ಅಸ್ಪಶ್ಯತಾಚರಣೆ) ಪ್ರಾಯಶ್ಚಿತ ಪಡೆದುಕೊಳ್ಳಿ ಎಂದು ರಾಜ ಗಾಂಭೀರ್ಯದಿಂದ ಖುರ್ಚಿಯ ಮೇಲೆ ಕುಳಿತ ವ್ಯಕ್ತಿ ಬೇರಾರು ಅಲ್ಲ. 

ಬೆಹನ್ ಕುಮಾರಿ ಮಾಯಾವತಿ. ಕನ್ನಡದಲ್ಲಿ ಪ್ರೀತಿಯಿಂದ ಹೇಳುವುದಾದರೆ ಅಕ್ಕ ಮಾಯಾವತಿ. ಮಾಯಾವತಿಯವರು ಹುಟ್ಟಿದ್ದು 1956ರ ಜನವರಿ 15ರಂದು. ತಂದೆ ಪ್ರಭುದಾಸ್ ದಯಾಳ್, ತಾಯಿ ರಾಮರತಿ, ಕಾಕತಾಳೀಯವೆಂದರೆ 1956ರ ಆ ವರ್ಷದ ಅಂತ್ಯದಲ್ಲೇ ಅಂದರೆ ಡಿಸೆಂಬರ್ 6ರಂದು ಬಾಬಾಸಾಹೇಬ್ ಅಂಬೇಡ್ಕರ್‌ರವರು ಈ ದೇಶ ವಾಸಿಗಳನ್ನು ಬಿಟ್ಟು ಹೋದದ್ದು, ಆದರೆ ಅವರು ಹೋಗುವುದಕ್ಕೆ ಮುನ್ನವೇ ಓರ್ವ ಧೀರ ಹೆಣ್ಣು ಮಗಳನ್ನು ತಮ್ಮ ಹೋರಾಟದ ರಥವನ್ನು ಎಳೆಯಲು ಈ ದೇಶದ ಮಡಿಲಿಗೆ ಇಟ್ಟು ಹೊರಟು ಹೋಗಿದ್ದರು!. ನಿಶ್ಚಿಂತೆ ಯಿಂದ ಹೇಳಬಹುದು; ಆ ಧೀರ ಹೆಣ್ಣು ಮಗಳು ಮಾಯಾವತಿಯವರಲ್ಲದೆ ಬೇರಾರು ಅಲ್ಲ ಎಂಬುದನ್ನು.

ಯಾಕೆಂದರೆ ಅಂಬೇಡ್ಕರರ ತತ್ವವನ್ನು, ಅವರ ಆಸೆ ಆಕಾಂಕ್ಷೆಗಳನ್ನು ಕ್ಷಣಕ್ಷಣಕ್ಕೂ ಹೆಜ್ಜೆ ಹೆಜ್ಜೆಗೂ ಉತ್ತರ ಪ್ರದೇಶದಲ್ಲಿ ಬಿತ್ತುತ್ತಿರುವ ಅವರು ಒಂದರ್ಥದಲ್ಲಿ ಅದನ್ನು ಅಂಬೇಡ್ಕರ್ ರಾಜ್ಯವನ್ನಾಗಿ ಮಾಡಿದ್ದಾರೆ. ಬಹುಶಃ ಅಂತಹ ದಿನವೊಂದು ಬರುತ್ತದೆ, ನನ್ನ ಚಿಂತನೆಗಳಿಗೆ ಈ ಪರಿಯ ಬೆಲೆ ಸಿಗುತ್ತದೆ, ಎಂದು ಸ್ವತಃ ಬಾಬಾಸಾಹೇಬರು ಕೂಡ ಕನಸು ಕಂಡಿರಲಿಲ್ಲವೋ ಏನೊ? ಮಾಯಾವತಿಯವರು ಆ ಪರಿಯಲ್ಲಿ ಅಂಬೇಡ್ಕರ್‌ರನ್ನು ಉತ್ತರಪ್ರದೇಶದಲ್ಲಿ ಪ್ರತಿಷ್ಠಾಪಿಸಿ ದ್ದಾರೆ. ತನ್ಮೂಲಕ ಇಡೀ ರಾಷ್ಟ್ರಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಎಂದರೆ ಏನು ಎಂದು ತೋರಿಸಿ ಕೊಡುತ್ತಿದ್ದಾರೆ.

ಹಾಗಿದ್ದರೆ ಮಾಯಾವತಿಯವರು ಇಂತಹ ಕೆಲಸವನ್ನು ಯಾವುದೋ ಕಚೇರಿಯಲ್ಲಿ ಕ್ಲರ್ಕ್ ಆಗಿ ಅಥವಾ ಆಫೀಸರ್ ಆಗಿ ಮಾಡಿದರೆ ? ಊಹೂಂ, Infact ಅವರು I.A.S  ಆಫೀಸರ್ ಆಗಬೇಕೆಂದೇ ಗುರಿ ಇಟ್ಟುಕೊಂಡವರು! ಆದರೆ ಆದದ್ದು ಮಾತ್ರ ಸಮಸ್ತ ಒಟ್ಟಾರೆ ಇಡೀ ವ್ಯವಸ್ಥೆಯನ್ನೇ ನಿಯಂತ್ರಿಸಬಲ್ಲಂತಹ ಮುಖ್ಯಮಂತ್ರಿ. ಅದು ಒಂದಲ್ಲ ಎರಡಲ್ಲ, ಬರೋಬ್ಬರಿ ನಾಲ್ಕು ಬಾರಿ! ಅದರಲ್ಲೂ ನಾಲ್ಕನೇ ಬಾರಿಯಂತೂ ಪೂರ್ಣ ಬಹುಮತದೊಂದಿಗೆ. undisputed queen  ಅಂಥಾರಲ್ಲ ಹಾಗೆ. ಆಶ್ಚರ್ಯ, ಯಾವ ಮುಖ್ಯಮಂತ್ರಿ ಪದವಿ ಪಡೆಯಲು ದಲಿತರು ಮೇಲ್ಜಾತಿ ಪಕ್ಷಗಳ ಮುಂದೆ ಕೈ ಕಟ್ಟಿ ನಿಲ್ಲುತ್ತಾರೋ, ಮೇಲ್ವರ್ಗದವರ ಬೂಟು ನೆಕ್ಕುತ್ತಾರೋ ಅಂತಹ ಮುಖ್ಯಮಂತ್ರಿ ಪದವಿಯನ್ನು ದಲಿತ ಹೆಣ್ಣು ಮಗಳೋರ್ವಳು ನಾಲ್ಕು ಬಾರಿ ಪಡೆಯುತ್ತಾಳೆಂದರೆ! ಹಾಗಿದ್ದರೆ ಮಾಯಾವತಿಯವರು ಮೇಲ್ಜಾತಿ ಪಕ್ಷಗಳ ಮುಂದೆ ತಲೆ ಬಗ್ಗಿಸಿ, ಕೈ ಕಟ್ಟಿ ನಿಂತು ಅಂತಹ ಪದವಿ ಪಡೆದರೆ? ಅಥವಾ ಅವರ ಚಮಚಾಗಿರಿ ಮಾಡಲು ತಮ್ಮ ಜೀವನವನ್ನೇ ಸಮರ್ಪಿಸಿದರೇ? ಖಂಡಿತ ಇಲ್ಲ.

ಅವರದೇ ಸ್ವಂತ ಮನೆ ಕಟ್ಟಿಕೊಂಡರು.  ’’Scheduled Caste Federation”  ಎಂಬ ಯಾವ ಸ್ವಂತ ಮನೆಯನ್ನು (ಪಕ್ಷ) ಕಟ್ಟಿ 1950ರ ದಶಕದಲ್ಲಿ ಅಂಬೇಡ್ಕರ್ ‘ಈ ಮನೆಯನ್ನು ನಿಮಗೋಸ್ಕರ ಕಟ್ಟಿದ್ದೇನೆ. ಇದು ಹಾಳಾಗದಂತೆ ಸುಣ್ಣ ಬಣ್ಣ ಬಳಿದು ವ್ಯವಸ್ಥಿತವಾಗಿ ಕಾಪಾಡುವುದು ನಿಮ್ಮ ಜವಾಬ್ದಾರಿ ಎಂದು ಕರೆ ಇತ್ತರೋ, ಕಾನ್ಷೀರಾಂರವರು ಕಟ್ಟಿದ ಅಂತಹದ್ದೇ ಮನೆಯ (ಬಿಎಸ್‌ಪಿ) ಅಧಿಪತಿಯಾಗಿ ಮಾಯಾವತಿ ಉತ್ತರ ಪ್ರದೇಶವೆಂಬ ಈ ದೇಶದ ಬೃಹತ್ ರಾಜ್ಯಕ್ಕೆ ನಾಲ್ಕುಬಾರಿ ಮುಖ್ಯಮಂತ್ರಿ ಯಾದರು. “Political power is the master key” ಎಂಬ ಅಂಬೇಡ್ಕರ್‌ರ ಸುಪ್ರಸಿದ್ಧ ನಾಣ್ನುಡಿಯಂತೆ ರಾಜಕೀಯ ಶಕ್ತಿ ಎಂಬ ಆ ಮಾಸ್ಟರ್‌ಕೀಯನ್ನು ಮಾಯಾವತಿ ನಾಲ್ಕು ಬಾರಿ ಪಡೆದುಕೊಂಡರು. ಅಂದಹಾಗೆ ಮುಂದೊಂದು ದಿನ ಅವರು ಈ ದೇಶದ ಸಂಸತ್ತಿನ ಮಾಸ್ಟರ್ ಕೀ ಯನ್ನು (ಪ್ರಧಾನಿ ಪಟ್ಟ) ಪಡೆದುಕೊಂಡರೂ ಅಚ್ಚರಿ ಏನಿಲ್ಲ.

ಹಾಗಂತ ಮಾಯಾವತಿಯವರಿಗೆ ಅಧಿಕಾರ ಎಂಬ ಮಾಸ್ಟರ್ ಕೀ ದಿಢೀರನೆ ಒಲಿಯಿತೆ? ಅಥವಾ ವಂಶಪಾರಂಪರ್ಯವಾಗಿ ಅವರಿಗೆ ಹಸ್ತಾಂತರ ವಾಯಿತೆ? ಮಾಜಿ ಪ್ರಧಾನಿ ದಿ.ಪಿ.ವಿ.ನರಸಿಂಹ ರಾವ್ ಹೇಳಿದ ಹಾಗೆ ಅದು ಪ್ರಜಾಪ್ರಭುತ್ವದ ಅದ್ಭುತ!. “It is a miracle of democracy” ಹೌದು, ಮಾಯಾವತಿ ಯವರು ರಾಷ್ಟ್ರ ರಾಜಕಾರಣದಲ್ಲಿ ಈ ಪರಿಯ ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಅದ್ಬುತವೇ. ಏಕೆಂದರೆ 1977ರಲ್ಲಿ I.A.S ಗೆ ತಯಾರಿ ನಡೆಸುತ್ತಿದ್ದ ಮಾಯಾವತಿಯವರನ್ನು ಕಾನ್ಷೀರಾಂ ಭೇಟಿ ಮಾಡಿದಾಗ ಅವರಿಗೆ ಕೇವಲ 21 ವರ್ಷ. ಹಾಗಂತ ಮಾಯಾವತಿ ದೊಡ್ಡ ಶ್ರೀಮಂತರ ಮಗಳು, ಅವರಿಂದ ನನ್ನ ಹೋರಾಟಕ್ಕೆ ಆರ್ಥಿಕ ಬಲ ಬರುತ್ತದೆ ಎಂದು ಕಾನ್ಷೀರಾಂರವರು ಮಾಯಾವತಿಯವರನ್ನು ಭೇಟಿ ಯಾಗಲಿಲ್ಲ. ಬದಲಿಗೆ ದೆಹಲಿಯಲ್ಲಿ ನಡೆದ ರ್ಯಾಲಿ ಯೊಂದರಲ್ಲಿ ಆಗಿನ ಕೇಂದ್ರ ಮಂತ್ರಿ ರಾಜ್ ನಾರಾಯಣ್‌ರವರು ದಲಿತರನ್ನು ಹರಿಜನರೆಂದು ಸಂಬೋಧಿಸಿದ್ದಕ್ಕೆ ಪ್ರತಿಯಾಗಿ 21ವರ್ಷದ ಮಾಯಾವತಿ ಎಂಬ ಆ ಶಾಲಾ ಶಿಕ್ಷಕಿ ಉಗ್ರವಾಗಿ ಪ್ರತಿಭಟಿಸಿದ್ದನ್ನು ಕೇಳಿ ಕುತೂಹಲಗೊಂಡು ಕಾನ್ಷೀರಾಂರವರು ಅವರನ್ನು ಭೇಟಿಯಾದರು.

ಕಾನ್ಷೀರಾಂರ BAMCEF (Backward and Minority Community Employees Federation)ನ ಸಕ್ರಿಯ ಸದಸ್ಯರಾಗಿ, 1981ರಲ್ಲಿ ಅವರು ಸ್ಥಾಪಿಸಿದ DS4  (ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ)ಯ ಕಾರ್ಯಕರ್ತರಾಗಿ ಕಾನ್ಷಿರಾಂರ ಜೊತೆ ಸೈಕಲ್‌ನಲ್ಲಿ ಇಡೀ ದೇಶವನ್ನೇ ಸುತ್ತಿದ ಮಾಯಾವತಿಯವರು ಕಾನ್ಷಿರಾಂರ ನೆರಳಾಗಿ, “DRDOದ ಮಾಜಿ ವಿಜ್ಞಾನಿ ನಡೆಸುತ್ತಿದ್ದ ಸಾಮಾಜಿಕ ರಾಜಕೀಯ ಸಂಶೋಧನೆಯ ಸಹಾಯಕರಾಗಿ ಸೇರಿಕೊಂಡರು.

ಮುಂದೆ BAMCEF ಮತ್ತು DS4 mock ಚಳವಳಿಗಳ ಯಶಸ್ಸಿನಿಂದ ಪ್ರೇರಣೆಗೊಂಡ ಕಾನ್ಷೀರಾಂ 1984ರ ಎಪ್ರಿಲ್ 14ರ ಅಂಬೇಡ್ಕರ್ ಜಯಂತಿಯಂದು ಬಹುಜನ ಸಮಾಜ ಪಕ್ಷವನ್ನು (ಬಿಎಸ್‌ಪಿ) ಸ್ಥಾಪಿಸಿದಾಗ ಮಾಯಾವತಿಯವರು ಕಾನ್ಷೀರಾಂರ ಪಕ್ಕ ನಿಂತಿದ್ದರು. ನಿಜ, ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಈ ದೇಶದ ಶೇ 85ರಷ್ಟಿದ್ದಾರೆ. ಅವರು ಬಹುಜನರು. ಉಳಿದ ಮೇಲ್ವರ್ಗದವರು ಶೇ.15ರಷ್ಟಿದ್ದಾರೆ ಅವರು ಮನುವಾದಿಗಳು. ಆದ್ದುದರಿಂದ ನನ್ನದು ಬಹುಜನರನ್ನು ಪ್ರತಿನಿಧಿಸುವ ಪಕ್ಷ ಎಂಬ ಕಾನ್ಷಿರಾಂರ ವೈಜ್ಞಾನಿಕ ರಾಜಕೀಯ ಸಿದ್ಧಾಂತವನ್ನು ಆ ಸಂದರ್ಭದಲ್ಲಿ ಬಹುತೇಕರು ಮಾಡಿರಬಹುದು. ಆದರೆ ಅದು mock ಅಲ್ಲ. Truth ಎಂಬುದನ್ನು ಹೆಜ್ಜೆ ಹೆಜ್ಜೆಗೆ ಸಾಧಿಸುತ್ತಾ ಹೋದವರು ಮಾಯಾವತಿ!

ಅಂತಹ ಸಾಧನೆಯ ಹಾದಿಯಲ್ಲಿ ಅವರು 1984ರ ಡಿಸೆಂಬರ್‌ನಲ್ಲಿ ಪ್ರಪ್ರಥಮವಾಗಿ ಲೋಕಸಭಾ ಚುನಾವಣೆಗೆ ಧುಮುಕಿದಾಗ ಪಡೆದದ್ದು 44,445 ಮತಗಳನ್ನು. ನಂತರ 1985ರ ಬಿಜ್ನೂರ್ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರು ಪಡೆದದ್ದು 61,504 ಮತಗಳನ್ನು. 1987ರ ಮೇ ತಿಂಗಳಿನಲ್ಲಿ ಹರಿದ್ವಾರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಭ್ಯರ್ಥಿಯಾದ ಮಾಯಾವತಿ 1,25,399 ಮತಗಳನ್ನು ಪಡೆದರು. ಹಾಗೆಯೇ ಆ ಚುನಾವಣೆಯಲ್ಲಿ 2ನೆ ಸ್ಥಾನ ಪಡೆದು ಕಾಂಗ್ರೆಸ್ಸಿಗೆ ನಡುಕ ಹುಟ್ಟಿಸಿದ ಅವರು, ಅಂತಹ ನಡುಕವನ್ನು ಕಾಂಗ್ರೆಸ್ ನಿರಂತರ ಅನುಭವಿಸುವಂತೆ ಮಾಡಿದ್ದು ಪ್ರಜಾಪ್ರಭುತ್ವದ ವ್ಯಂಗ್ಯವೆನ್ನದೆ ವಿಧಿಯಿಲ್ಲ!

1989 ಬಿಜ್ನೂರ್ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಶ್ರಮವಹಿಸಿದ ಮಾಯಾವತಿ 1,83,189 ಮತಗಳನ್ನು ಪಡೆದು ದಿಗ್ವಿಜಯಿಯಾದರು. ತನ್ಮೂಲಕ ತಾವು ಪ್ರಜಾಪ್ರಭುತ್ವದ ಅದ್ಭುತ ಎಂಬ ವಿಶೇಷಣಕ್ಕೆ ಸಾಕ್ಷಿಯಾದರು. ಒಂದಂತು ನಿಜ, ಮಾಯಾವತಿ ಹೀಗೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದಂತೆ ಕಾಂಗ್ರೆಸ್ ಎಂಬ ಹುಸಿ ಜಾತ್ಯಾತೀತ ವಾದಿಯ ಬುಡ ಅಲುಗಾಡುತ್ತಾ ಹೋಯಿತು.

ರಾಜಕೀಯ ಅಧಿಕಾರದ ಮಹತ್ವ ಗೊತ್ತಿಲ್ಲದ ಜನಸಮೂಹವನ್ನು ಯಾವ ಕಾಂಗ್ರೆಸ್ ದಶಕಗಳಿಂದ ಮೋಸಗೊಳಿಸಿತ್ತೋ ಅಂತಹ ಮೋಸವನ್ನು ಬಯಲುಗೊಳಿಸುತ್ತಾ ಮಾಯಾವತಿ ಮುನ್ನುಗ್ಗ ತೊಡಗಿದರು. ನಡುವೆ ಅವರ ಈ ಮುನ್ನುಗುವಿಕೆಗೆ ಯಾರೂ ತಡೆಯೊಡ್ಡಲಿಲ್ಲವೆ ? ಅಥವಾ ಪುರುಷ ಪ್ರಧಾನ ರಾಜಕಾರಣದಲ್ಲಿ ಮಹಿಳೆಯೋರ್ವಳನ್ನು ಹೀಗೆ ಬೆಳೆಯಲು ಎಲ್ಲರೂ ಬಿಟ್ಟರೆ ? ಬಿಡುವುದೆಂತು ಬಂತು. 1984ರಲ್ಲಿ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಹೇಗೆ ಅವರ ಸ್ವಂತ ಅಂಗರಕ್ಷಕ ಪಡೆಯವರೆ ಹೊಡೆದುಕೊಂದರೋ ಅದೇ ರೀತಿ ಜೂನ್ 2, 1995ರಂದು ಮಾಯಾವತಿಯನ್ನು ಕೊಲ್ಲುವ ಕ್ರೂರ ಪ್ರಯತ್ನ ನಡೆಯಿತು.

ಲಕ್ನೋ ಗೆಸ್ಟ್ ಹೌಸ್ ಪ್ರಕರಣ ಎಂಬ ಕುಪ್ರಸಿದ್ಧ ಆ ಪ್ರಕರಣದಲ್ಲಿ ಮಾಯಾವತಿ ಬದುಕಿದ್ದೇ ಹೆಚ್ಚು ! ಏಕೆಂದರೆ ಸುಮಾರು 200ಕ್ಕೂ ಹೆಚ್ಚಿದ್ದ ಶಸ್ತ್ರ ಸಜ್ಜಿತ ಗೂಂಡಾಗಳು ಲಕ್ನೋ ಗೆಸ್ಟ್ ಹೌಸ್‌ನತ್ತ ನುಗ್ಗಿ, ಶಾಸಕರ ಸಭೆ ನಡೆಸುತ್ತಿದ್ದ ಮಾಯಾವತಿ ಮತ್ತವರ ಬೆಂಬಲಿಗರ ಮೇಲೆ ಮುಗಿ ಬಿದ್ದಿತು. ಚಮ್ಮಾರರಿಗೆ ಕೊಬ್ಬುಬಂದಿದೆ. ಅವರಿಗೆ ಇಂದು ಪಾಠಕಲಿಸುತ್ತೇವೆ ಎಂದು ಚಾಕು, ಚೂರಿ, ಇತ್ಯಾದಿ ಹರಿತವಾದ ಆಯುಧಗಳೊಂದಿಗೆ ನುಗ್ಗಿದ ಆ ಗುಂಪು.

ಮಾಯಾವತಿಯವರನ್ನು ಹೊರಗೆಳೆಯಿರೋ.. .. . ಕೊಲ್ಲಿರೋ. .. . ಎಂದು ಅಬ್ಬರಿಸುತ್ತಾ ಅಶ್ಲೀಲ ಪದಗಳಿಂದ ಅವರನ್ನು ನಿಂದಿಸುತ್ತಾ ಹಲ್ಲೆ ಮಾಡಲು ಮುಂದಾಯಿತು. ವಿಜಯ್ ಭೂಷಣ್ ಮತ್ತು ಸುಭಾಷ್‌ಸಿಂಗ್ ಬಾದಲ್ ಎಂಬ ಇಬ್ಬರು ಕಿರಿಯ ಪೊಲೀಸ್ ಅಧಿಕಾರಿಗಳು ಧೈರ್ಯ ಹಾಗೂ ಸಾಹಸದಿಂದ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಆ ದಿನ ಆ ವಿಚ್ಛಿದ್ರಕಾರಿ ಗುಂಪನ್ನು ಚದುರಿಸದೇ ಹೋಗಿದ್ದರೆ ಮಾಯಾವತಿ ಎಂಬ ಪ್ರಜಾಪ್ರಭುತ್ವದ ಆ ಅದ್ಭುತ ಖಂಡಿತ ಇಂದು ನಮ್ಮ ಮುಂದೆ ಇರುತ್ತಿರಲಿಲ್ಲ… ಈ ದೇಶದ ಕೋಟ್ಯಂತರ ಶೋಷಿತರ ಆಶೀರ್ವಾದ, ಸಂಕಷ್ಟದ ಕ್ಷಣಗಳನ್ನು ಮೆಟ್ಟಿ ನಿಲ್ಲುವ ತಮ್ಮ will power  ನಿಂದಾಗಿ ಮಾಯಾವತಿ ಬದುಕುಳಿದರು. ಅವರ ಜೀವನವನ್ನೇ ಪರೀಕ್ಷೆಗೆ ಒಡ್ಡಿದ ಆ ಘಟನೆ ಅವರನ್ನು ಒಂದರ್ಥದಲ್ಲಿ ಉಕ್ಕಿನ ಮಹಿಳೆಯನ್ನಾಗಿಸಿತು.

ಘಟನೆಯ ನಂತರ ತಮ್ಮ ಜೀವನದಲ್ಲಿ ಮತ್ತೆ ಅವರು ಹಿಂದಿರುಗಿ ನೋಡಲಿಲ್ಲ. ಏಕೆಂದರೆ ಘಟನೆಯ ಮಾರನೆಯ ದಿನವೇ ಅಂದರೆ ಜೂನ್ 3, 1995ರಂದು ಈ ದೇಶದ ಕೋಟ್ಯಂತರ ಬಹುಜನರು ಶತ ಶತಮಾನಗಳಿಂದ ಏನು ಬಯಸಿದ್ದರೊ ಅದು ನಡೆದು ಹೋಗಿತ್ತು ! ಮಾಯಾವತಿ ಎಂಬ ದಲಿತ ಹೆಣ್ಣು ಮಗಳು ಉತ್ತರ ಪ್ರದೇಶ ಎಂಬ ಆ ಬೃಹತ್ ರಾಜ್ಯದ, ತನ್ಮೂಲಕ ಈ ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಯಾವ political power ಅನ್ನು ಅಂಬೇಡ್ಕರ್ Master key  ಎಂದಿದ್ದರೋ ಅಂತಹ ಮಾಸ್ಟರ್‌ಕೀಯನ್ನು ಮಾಯಾವತಿ ತಮ್ಮ ಕೈಗೆ ತೆಗೆದುಕೊಂಡಿದ್ದರು.

 

ಹಾಗಿದ್ದರೆ ತಮ್ಮ ಪ್ರಥಮ ಅವಧಿಯಲ್ಲಿ ಮಾಯವತಿಯವರು ಏನು ಮಾಡಿದರು? ಒಂದಷ್ಟನ್ನು ಉಲ್ಲೇಖಿಸುವುದಾದರೆ, ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದ 1,45,000 ರೌಡಿಗಳನ್ನು ಬಂಧಿಸಿದರು. ಮುಸಲ್ಮಾನರಿಗೆ ಉದ್ಯೋಗದಲ್ಲಿ ಶೇ.8.44ರಷ್ಟು ಮೀಸಲಾತಿ ನೀಡಿ ಅವರನ್ನು ಓಬಿಸಿ ಪಟ್ಟಿಗೆ ಸೇರಿಸಿದರು. ಮಥುರಾದ ಶ್ರೀಕೃಷ್ಣನ ದೇವಸ್ಥಾನದ ಪಕ್ಕದಲ್ಲಿದ್ದ ಮಸೀದಿಯನ್ನು ಒಡೆಯುವ ವಿಶ್ವಹಿಂದೂಪರಿಷತ್ತಿನ ಪ್ರಯತ್ನವನ್ನು ನಿರ್ದಾಕ್ಷಿಣ್ಯ ವಾಗಿ ವಿಫಲಗೊಳಿಸಿದ ಅವರು ಹಿಂದೂ ಧರ್ಮದ ವಿರುದ್ಧ ತಮ್ಮ ಜೀವನದುದ್ದಕ್ಕೂ ಕತ್ತಿ ಝಳಪಿಸಿದ ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ನಾಯಕರ್‌ರ ನೆನಪಿನಲ್ಲಿ ಒಂದು ವಾರಗಳ ಕಾಲ ರಾಜ್ಯಾದ್ಯಂತ ಪೆರಿಯಾರ್ ಮೇಳ ನಡೆಸಿದರು. 

ಪರಿಣಾಮವಾಗಿ ತಮ್ಮ ಸರಕಾರವನ್ನೇ ಕಳೆದುಕೊಂಡರು. ಆಶ್ಚರ್ಯ ಬೇಡ, ಮರು ವರ್ಷ ನಡೆದ ಚುನಾವಣೆಯಲ್ಲಿ 67 ಸ್ಥಾನ ಪಡೆದ ಮಾಯವತಿಯವರು ಮತ್ತೆ ಬಿಜೆಪಿಯ ಬೆಂಬಲದಿಂದ ಮುಖ್ಯಮಂತ್ರಿ ಯಾದರು. ಅದು 6 ತಿಂಗಳ ಮಟ್ಟಿಗೆ. ಈ ಸಂದರ್ಭದಲ್ಲಿನ ಅವರ ಸಾಧನೆ ಒಂದೇ ಪದದಲ್ಲಿ ಹೇಳುವುದಾದರೆ ಅಪೂರ್ವವಾದುದು. ಆರು ವರ್ಷಗಳ ಸಾಧನೆ ಯನ್ನು ಕೇವಲ ಆರೇ ತಿಂಗಳಲ್ಲಿ ಮಾಡಿದರು ಎಂದರೂ ಅತಿಶಯೋಕ್ತಿಯೇನಲ್ಲ. ಏಕೆಂದರೆ ಆರು ತಿಂಗಳ ಆ ಅವಧಿಯಲ್ಲಿ ಭೂ ಹೀನ ಕೂಲಿ ಕಾರ್ಮಿಕರಿಗೆ ವಿಶೇಷವಾಗಿ ದಲಿತರಿಗೆ 7.5ಲಕ್ಷ ಎಕರೆ ಭೂಮಿ ವಿತರಿಸಿದರು. ದಲಿತರ 60,000 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿಮಾಡಿದರು. ಆರೇ ತಿಂಗಳಲ್ಲಿ ರಾಜ್ಯಾದ್ಯಂತ 15,000 ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಿ ಉತ್ತರಪ್ರದೇಶ ವನ್ನು ಅಂಬೇಡ್ಕರ್ ರಾಜ್ಯ ಮಾಡುವ ತಮ್ಮ ಕನಸಿಗೆ ಅಡಿಗಲ್ಲು ಇಟ್ಟರು.

ತಮ್ಮ ಆರು ತಿಂಗಳ 2ನೇ ಅವಧಿಯ ಆಡಳಿತದ ನಂತರ ಮಾಯಾವತಿಯವರು ಮತ್ತೊಮ್ಮೆ ಮುಖ್ಯಮಂತ್ರಿಯಾದುದ್ದು 2002 ಮಾರ್ಚ್ ತಿಂಗಳಿನಲ್ಲಿ; ಮತ್ತೆ ಅದೇ ಬಿಜೆಪಿಯ ಬೆಂಬಲ ದೊಂದಿಗೆ. ಈ ಬಾರಿಯ ಅವರ ಭವ್ಯ ಸಾಧನೆ ಎಂದರೆ ಪ್ರತಾಪಗಢದ ಸ್ವಘೋಷಿತ ರಾಜ, ರಾಜಾಬೈಯ ಅಲಿಯಾಸ್ ರಘುರಾಜ್ ಪ್ರತಾಪ್‌ಸಿಂಗ್‌ನನ್ನು ಮಟ್ಟಹಾಕಿದ್ದು. ಥೇಟ್ ಹಿಂದೀ ಸಿನಿಮಾಗಳ ಶೈಲಿಯಲ್ಲಿ ಕೊಲೆ, ಸುಲಿಗೆ, ದರೋಡೆಯನ್ನೇ  ಮಾಡಿಕೊಂಡಿದ್ದ, ಇಡೀ ಪ್ರತಾಪಗಡ ಜಿಲ್ಲ್ಲೆಯನ್ನೇ ಭಯದ ಕೂಪಕ್ಕೆ ತಳ್ಳಿದ್ದ ರಾಜಾಬೈಯನನ್ನು ಕೆಣಕುವ ಸಹಾಸಕ್ಕೆ ಹಿಂದಿನ ಯಾವ ಮುಖ್ಯಮಂತ್ರಿಗಳು ಕೈ ಹಾಕಿರಲಿಲ್ಲ. ಅದರೆ ಅವನನ್ನು ಪೋಟಾ ಕಾಯ್ದೆಯಡಿಯಲ್ಲಿ ಬಂಧಿಸಿದ ಮಾಯಾವತಿಯವರು ಅವನ 11,000 ಎಕರೆ ಭೂಮಿಯನ್ನು ವಶಕ್ಕೆ ತೆಗೆದುಕೊಂಡರು. ಅಲ್ಲದೆ ಆತ ಸ್ವತಃ ನಿರ್ಮಿಸಿಕೊಂಡಿದ್ದ ಬೃಹತ್ ಸರೋವರ ಮಾದರಿಯ ಉದ್ಯಾನವನವನ್ನು ವಶಪಡಿಸಿಕೊಂಡು ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಪಕ್ಷಿಧಾಮ ಎಂದು ಹೆಸರಿಟ್ಟರು! ಈ ಘಟನೆಯ ಮೂಲಕ ಉಕ್ಕಿನ ಮಹಿಳೆ ಇಡೀ ಜಗತ್ತಿಗೆ ತನ್ನ ನೈಜ ಉಗ್ರ ರೂಪ ತೋರಿದ್ದರು.

ದೌರ್ಜನ್ಯಕೋರರಿಗೆ ತನ್ನ ರಾಜ್ಯದಲ್ಲಿ ಯಾವ ರೀತಿ ಮರ್ಯಾದೆ ಸಿಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಇಡೀ ದೇಶಕ್ಕೆ ಸಾರಿದ್ದರು. ಅಂದಹಾಗೆ ಒಬ್ಬ ರಾಜಬೈಯನನ್ನು ಹೀಗೆ ಮಟ್ಟ ಹಾಕಿದ ಮೇಲೆ ಅದೆಷ್ಟು ಶೋಷಕ ಪುಡಿ ರಾಜಬೈಯಗಳ ತೊಡೆ ನಡುಗಿರಬೇಡ? ಮಾಯಾವತಿಯವರನ್ನು ಎನ್ನುವುದು ಈ ಕಾರಣಕ್ಕೇ!

formulasocial engineering   formula ನಡುವೆ ತಾಜ್ ಕಾರಿಡಾರ್ ಹಗರಣದ ಕಾರಣದಿಂದಾಗಿ ಅಧಿಕಾರ ಕಳೆದುಕೊಂಡರೂ ಮಾಯಾವತಿ ಒದಗಿ ಬಂದ ಕಷ್ಟಗಳಿಗೆ ಎದೆಗುಂದಲಿಲ್ಲ. ಇಂತಹ ಕಷ್ಟಕಾಲದಲ್ಲಿಯೇ ತಮ್ಮ ಪ್ರೀತಿಯ ಗುರು ಮಾರ್ಗದಾತ, ಬಾಬಾಸಾಹೇಬ್ ಅಂಬೇಡ್ಕರ್ ರವರ ನಂತರ ಶೋಷಿತರ ಅಶಾಕಿರಣವಾಗಿ ಮೂಡಿಬಂದಿದ್ದ ದಾದಾಸಾಹೇಬ್ ಕಾನ್ಷಿರಾಂರ ಕಳೆದುಕೊಂಡ ಮಾಯವತಿ ಒಂದರ್ಥದಲ್ಲಿ ಅನಾಥರಾದರು. ಆದರೆ ಮಾಯಾವತಿ ಆ ಅನಾಥ ಮನಸ್ಥಿತಿಯಲ್ಲಿ ಹೆಚ್ಚು ದಿನ ಇರುವ ಹಾಗಿರಲಿಲ್ಲ. ಏಕೆಂದರೆ ಕಾನ್ಷಿರಾಂ ಅವರ ಮೇಲೆ ಹೊರಿಸಿದ್ದ ಜವಾಬ್ದಾರಿ ಅಂತಹದ್ದಾಗಿತ್ತು. ಪದೇ ಪದೇ ಅಲ್ಪಮತ ಪಡೆದು ಬಿಜೆಪಿ ಬೆಂಬಲದಿಂದ ಅಧಿಕಾರ ನಡೆಸುತ್ತಿದ್ದರ ಬಗ್ಗೆ ರೋಸಿ ಹೋಗಿದ್ದ ಅವರು ಪೂರ್ಣ ಬಹುಮತ ಪಡೆಯುವುದು ಹೇಗೆ ಎನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಅದಕ್ಕಾಗಿ ತಮ್ಮ ಬಹುಕಾಲದ ಬಹುಜನ ಸಮಾಜ ಸಿದ್ಧಾಂತವನ್ನು ಬದಲಿಸಿ ಸರ್ವಜನ ಸಮಾಜ ಸಿದ್ದಾಂತವನ್ನು ಚಾಲನೆಗೆ ತಂದರು.

ಈ ಸಂದರ್ಭದಲ್ಲಿ ಅವರ ಜೊತೆಯಾದರವರೆಂದರೆ ನಿವೃತ್ತ ನ್ಯಾಯಾಧೀಶರೋರ್ವರ ಮಗನಾದ ಬ್ರಾಹ್ಮಣ ಸಮಾಜಕ್ಕೆ ಸೇರಿದ ಸತೀಶ್ ಚಂದ್ರ ಮಿಶ್ರ. ಯಾವ ಎರಡು ಧ್ರುವಗಳು ಸಮಾಜದಲ್ಲಿ ಪರಸ್ಪರ ವಿರುದ್ದ ದಿಕ್ಕಿನಲ್ಲಿವೆಯೋ ಅಂತಹ ಎರಡು ಧ್ರುವಗಳನ್ನು ಅಂದರೆ ದಲಿತರು ಮತ್ತು ಬ್ರಾಹ್ಮಣರನ್ನು ರಾಜಕೀಯವಾಗಿ ಒಂದು ಗೂಡಿಸುವ, ಆ ಮೂಲಕ ಬಹುಮತ ಪಡೆಯುವ ವಿಚಿತ್ರ ವನ್ನು ಪ್ರಯೋಗಿಸಿತು ಮಾಯಾ-ಮಿಶ್ರ ಜೋಡಿ. ಇದಕ್ಕೆ ಅವರು ಕರೆದಿದ್ದು ಎಂದು! ಆಶ್ಚರ್ಯ! ಮಾಯಾವತಿ ಮತ್ತು ಸತೀಶ್ ಚಂದ್ರ ಮಿಶ್ರರ ಈ ಫಲನೀಡಿತ್ತು.

social engineering ದಲಿತ, ಬ್ರಾಹ್ಮಣರ ಜೊತೆ ನಸೀಮುದ್ದೀನ್ ಸಿದ್ದೀಕಿಯವರ ನೇತೃತ್ವದಲ್ಲಿ ಮುಸ್ಲಿಂ ಜನರ ಬೆಂಬಲ ಪಡೆದ ಮಾಯಾವತಿಯವರು 2007ರ ಮೇ ತಿಂಗಳಿನಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಪಡೆದು ಪೂರ್ಣ ಬಹುಮತ ಪಡೆದರು! ಕಾನ್ಷೀರಾಂ ಎಂಬ ಸಾಮಾಜಿಕ ವಿಜ್ಞಾನಿಯ ಶಿಷ್ಯೆ ನಡೆಸಿದ ಈ ನ ಪ್ರಯೋಗ ಅದ್ಭುತ ಫಲನೀಡಿತ್ತು. 206 ಸದಸ್ಯರ ಸರಳ ಬಹುಮತದೊಂದಿಗೆ ಮಾಯಾವತಿ ಯವರು ನಾಲ್ಕನೇ ಬಾರಿಗೆ ಉತತಿರ ಪ್ರದೇಶದ ಮುಖ್ಯಮಂತ್ರಿಯಾದರು. ಒಂದಂತೂ ನಿಜ. ಯಾವ ರಾಜಕೀಯ ಅಧಿಕಾರಕ್ಕಾಗಿ ಶೋಷಿತರು ಅನ್ಯ ಪಕ್ಷಗಳ ಬಾಗಿಲಲ್ಲಿ ನಿಂತು ಗುಲಾಮಗಿರಿ ಮಾಡು ತ್ತಾರೋ, ಹಲ್ಲುಗಿಂಜಿ ನೆಲಕೆರೆಯುತ್ತಾರೋ ಅಂತಹ ಸ್ವಾಭೀಮಾನ ರಹಿತ ದಲಿತ ರಾಜಕಾರಣಿಗಳಿಗೆ ಮಾಯಾವತಿಯವರು ಅಂಬೇಡ್ಕರ್‌ರವರ ಮಾರ್ಗದಲ್ಲಿ ಸ್ವಾಭಿಮಾನ ಪೂರ್ವಕವಾಗಿ ಅಧಿಕಾರ ಪಡೆಯುವುದು ಹೇಗೆಂದು ತೋರಿಸಿಕೊಟ್ಟರು. ಶೋಷಕ ಸಮುದಾಯಗಳನ್ನು ಮಟ್ಟಹಾಕುವುದು ಹೇಗೆ ಅಥವಾ ಆ ಶೋಷಕ ಸಮುದಾಯಗಳನ್ನು ನಮ್ಮ ದಾರಿಗೆ ತರುವುದು ಹೇಗೆ ಎಂಬುದರ ಬಗ್ಗೆ ಇಡೀ ದಲಿತ ಸಮುದಾಯಕ್ಕೆ ಪಾಠ ಹೇಳಿಕೊಟ್ಟರು.

intermediate ಇಂದು ಉತ್ತರ ಪ್ರದೇಶದಲ್ಲಿ ಶೇ.10ರಷ್ಟಿರುವ ಬ್ರಾಹ್ಮಣರು ಮಾಯಾವತಿಯವರಲ್ಲಿ ರಕ್ಷಣೆ ಪಡೆದಿದ್ದಾರೆ. ಅವರ ಬೆಂಬಲಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಅಂತಹದ್ದೇ ಘಟನೆ ದೇಶಾದ್ಯಂತ ನಡೆದರೆ? ಬ್ರಾಹ್ಮಣರೇ ದಲಿತರ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಸಂದೇಶ ಇಡೀ ದೇಶಕ್ಕೆ ಸಾರಲ್ಪಟ್ಟರೆ? ಖಂಡಿತ ಅಲ್ಲಿ ಸಡಿಲವಾಗುವುದು ಜಾತಿ ವ್ಯವಸ್ಥೆ. ಜಾತಿ ವ್ಯವಸ್ಥೆಯ ಸೃಷ್ಟಿಕರ್ತರು ಮತ್ತು ಜಾತಿ ವ್ಯವಸ್ಥೆಯ ಬಲಿ ಪಶುಗಳು ಒಂದಾಗಿದ್ದಾರೆ ಇನ್ನು ನಮಗೇನು ಕೆಲಸ ಎಂದು ಬ್ರಾಹ್ಮಣ ಮತ್ತು ದಲಿತರ ಮಧ್ಯೆ ಬರುವ ಇತರ ಜಾತಿಗಳಿಗೆ ಖಂಡಿತ ಅನಿಸೇ ಅನಿಸುತ್ತದೆಯಲ್ಲವೆ? ಹಾಗಾದಾಗ ಇಡೀ ದೇಶದಲ್ಲಿ ಜಾತೀಯತೆ ಮುಕ್ತ ಸಮಸಮಾಜ ನಿರ್ಮಾಣ ಖಂಡಿತ ಆಗುತ್ತದೆ.

ಕಡೆಯದಾಗಿ ಹೇಳುವುದಾದರೆ ಅಂಬೇಡ್ಕರರು ಜಾತಿ ನಿರ್ಮೂಲನೆ ಎಂಬ ಕೃತಿ ಬರೆದು ಅದನ್ನು ನಿರ್ಮೂಲನೆ ಮಾಡುವುದು ಹೇಗೆಂದು ಕನಸು ಕಂಡರು. ಕಾನ್ಷೀರಾಂರವರು ಅಂಬೇಡ್ಕರ್ ರವರ ಅ ಕೃತಿಯನ್ನು ಓದಿ ಬಹುಜನ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಚಿಂತಿಸಿದರು. ಅಂಬೇಡ್ಕರ್ ಮತ್ತು ಕಾನ್ಷೀರಾಂರವರ ಚೇತನವನ್ನು ತಮ್ಮ ಹೃದಯದಲ್ಲಿ ಮನಸ್ಸಿನಲ್ಲಿ ತುಂಬಿಕೊಂಡಿರುವ ಮಾಯವತಿಯವರು ಜಾತಿ ನಿರ್ಮೂಲನೆಯ ಈ ನಿಟ್ಟಿನಲ್ಲಿ ಸರ್ವಜನ ಸಮಾಜ, ಆ ಮೂಲಕ ಸಮಸಮಾಜ ನಿರ್ಮಾಣದತ್ತ ಹೊರಟಿದ್ದಾರೆ. ಅಕಸ್ಮಾತ್ ಮಾಯಾವತಿಯವರು ತಮ್ಮ ಈ ಪ್ರಯತ್ನದಲ್ಲಿ ಯಶಸ್ವಿಯಾದರೆ? ಖಂಡಿತ ಈ ದೇಶದಲ್ಲಿ ಅತ್ಯಂತ ಅದ್ಭುತವಾದ ವ್ಯವಸ್ಥೆಯೊಂದು ನಿರ್ಮಾಣವಾಗುತ್ತದೆ. ಅಂತಹ ಅದ್ಭುತ ವ್ಯವಸ್ಥೆಯಲ್ಲಿ ಸಮಬಾಳು, ಸಮಪಾಲು ಎಂಬ ಸಿದ್ದಾಂತ ರಾರಾಜಿಸುತ್ತಿರುತ್ತದೆ. ಅಂಬೇಡ್ಕರರ ಜಾತಿ ನಿರ್ಮೂಲನೆಯ ಕನಸು ನನಸಾಗಿರುತ್ತದೆ.
ಜಾತಿ ನಿರ್ಮೂಲನೆಯ, ಸಮಸಮಾಜ ನಿರ್ಮಾಣದ ಈ ದಿಶೆಯಲ್ಲಿ ಮಾಯಾವತಿಯವರ ಈ ನಡೆ ನಿಜಕ್ಕೂ ಅಪ್ಯಾಯಮಾನವಾದುದಲ್ಲವೆ? ಬನ್ನಿ ಈ ನಿಟ್ಟಿನಲ್ಲಿ ಮಾಯಾವತಿಯವರನ್ನು ಬೆಂಬಲಿಸೋಣ. ಅವರ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ. ಅವರಿಗೆ ಶುಭಾಶಯ ತಿಳಿಸೋಣ.
Wish you happy birthday ಬೆಹನ್ ಜೀ …

:-ರಘೋತ್ತಮ

_____________

http://vbnewsonline.com/JanaJanitha/40613/


ಸಮಾನತೆಯ ಸಂಕೇತ

02/12/2010
ಸಮಾನತೆಯ ಸಂಕೇತ
– ಡಾ. ಬಸವಪ್ರಭು ಪಾಟೀಲ, ಬೆಟ್ಟದೂರು
ನಾವು ಈಗ ಬಸವಣ್ಣನವರನ್ನು ಮರೆತಿದ್ದೇವೆ. ಅದರರ್ಥ ಗಾಂಧಿ – ಮಾರ್ಕ್ಸ್ ಅಂಬೇಡ್ಕರ್ ನೆನಪಿದ್ದಾರೆ ಎಂದಲ್ಲ.

ಭಾರತದ ಸಂದರ್ಭದಲ್ಲಿ ಧರ್ಮವೆಂದರೆ ದೇವಸ್ಥಾನ, ಪೂಜೆ, ಯಜ್ಞ, ಹೋಮ ಇತ್ಯಾದಿಗಳು ಎಂಬ ಭಾವನೆ ಇತ್ತು. ಇಂತಹ ಭಾವನೆ ಈಗಲೂ ಇದೆ. ಬಸವಣ್ಣನವರು ಸ್ಥಾಪನೆ ಮಾಡಿದ ಧರ್ಮ ಇಂಥದ್ದಲ್ಲ. ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸಿದ ಅಂತ್ಯಜರಿಗೆ ಲಿಂಗ ದೀಕ್ಷೆ ನೀಡುವ ಮೂಲಕ ಸಮಾನತೆ ತಂದರು. ಲಿಂಗಾಯತ ಎಂಬುದು ಧರ್ಮವೂ ಅಲ್ಲ; ಜಾತಿಯೂ ಅಲ್ಲ. ಅದು  ಒಂದು ಮಾರ್ಗ (ಈಗ ಅದನ್ನು ಕೆಲವರು ಜಾತಿ ಮಾಡಲು ಯತ್ನಿಸುತ್ತಿದ್ದಾರೆ). 

ಅಂಬೇಡ್ಕರ್ ಅವರು ಅಂತ್ಯಜರ ವಿಮೋಚನೆಗೆ ಹೋರಾಟ ಮಾಡಿದರೆ, ಬ್ರಾಹ್ಮಣರ ಕುಲದಲ್ಲಿ ಜನಿಸಿದ ಬಸವಣ್ಣ ಅವರಲ್ಲಿ ಆತ್ಮಸ್ಥೈರ್ಯ ಮತ್ತು ಧೈರ್ಯ ತುಂಬಿದರು. ಅಂತ್ಯಜರನ್ನು ಅಪ್ಪ,ಅಣ್ಣ, ಬೊಪ್ಪ, ಬೆಕ್ಕಯ್ಯ ಎಂದು ಕರೆದರು. ಇದನ್ನು ಅವರು ಪ್ರಚಾರಕ್ಕಾಗಿ ಮಾಡಲಿಲ್ಲ. ಅಂತ್ಯಜರ ನೋವು ನಲಿವುಗಳಿಗೆ ಬಸವಣ್ಣನವರ ಅಂತಃಕರಣ ಮಿಡಿಯಿತು. ಅಂತ್ಯಜರು ವಚನಕಾರರಾಗಿ ಅನುಭವ ಮಂಟಪದಲ್ಲಿ ಕಾಣಿಸಿಕೊಂಡರು.

ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಹೋರಾಡಿದರೆ ಬಸವಣ್ಣನವರು ವೈದಿಕತೆ ವಿರುದ್ಧ ಹೋರಾಟ ಮಾಡಿದರು. ಶಾಸ್ತ್ರಗಳ ಕಪಿ ಮುಷ್ಟಿಯಲ್ಲಿ ಸಿಲುಕಿದ್ದ ಜನ ಸಾಮಾನ್ಯರನ್ನು ಬಸವಣ್ಣನವರು  ಬಿಡುಗಡೆಗೊಳಿಸಿದರು. ಇದು ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತ ದೊಡ್ಡದು. ಈ ಹೋರಾಟ ಈಗಲೂ ಮುಂದುವರಿದಿದೆ.

ಕಾರ್ಲ್ ಮಾರ್ಕ್ಸ್ ಆರ್ಥಿಕ ಸಮಾನತೆಗಾಗಿ ದುಡಿಯುವ ವರ್ಗಗಳ ಬಗ್ಗೆ ಕಾಳಜಿ ತೋರಿದರೆ ಬಸವಣ್ಣ ಕಾಯಕ ಮತ್ತು ದಾಸೋಹದ ಮೂಲಕ ಆರ್ಥಿಕ ಸಮಾನತೆ ತಂದರು. ಇನ್ನೂ ಬಿಡಿಸಿ ಹೇಳಬೇಕೆಂದರೆ ಸತ್ಯ ಶುದ್ಧವಾಗಿ ದುಡಿಯಬೇಕು. ಬಂದ ಆದಾಯದಲ್ಲಿ ಹೆಚ್ಚಾದುದನ್ನು ಸಮಾಜಕ್ಕೆ ನೀಡಬೇಕು. ಇದರಿಂದ ಸಮಾಜದಲ್ಲಿ ಶ್ರೀಮಂತ – ಬಡವರ ನಡುವೆ ಅಂತರ ಕಡಿಮೆಯಾಗುತ್ತದೆ ಎಂಬ ಅವರ ಚಿಂತನೆ ಆಗಿತ್ತು.

ನಾವು ಈಗ ಬಸವಣ್ಣನವರನ್ನು ಮರೆತಿದ್ದೇವೆ. ಅದರರ್ಥ ಗಾಂಧಿ – ಮಾರ್ಕ್ಸ್  ಅಂಬೇಡ್ಕರ್ ನೆನಪಿದ್ದಾರೆ ಎಂದಲ್ಲ.

———

http://www.prajavani.net/Content/Jun132010/sunday20100612189453.asp

 


ಬೌದ್ಧರ ನಾಡಿನಲ್ಲಿ ಇದೇನಿದು ತಲ್ಲಣ

02/12/2010
ಪಿ.ಜಿ.ವಿಜು
ಚೀನಾ ತನ್ನ ಆಕ್ರಮಣಕಾರಿ ನಡೆಯೊಂದಿಗೆ ಅಲ್ಲಿ ಎಲ್ಲವನ್ನೂ ಆಕ್ರಮಿಸಿ ಕುಳಿತಿದೆ. ಹೀಗಾಗಿ ಅಲ್ಲಿ ಸೇನಾಧಿಕಾರಿಗಳದೇ ಕಾರುಬಾರು. ಮಾನವಹಕ್ಕುಗಳ ಉಲ್ಲಂಘನೆ, ಪ್ರಜಾಸತ್ತೆಯ ಮೌಲ್ಯಗಳ ತುಚ್ಛೀಕರಣ ಸಾಮಾನ್ಯವಾಗಿದೆ.

ಪ್ರಾಚೀನ ಕಾಲದಿಂದಲೂ ಭಾರತದೊಂದಿಗೆ ಸಾಂಸ್ಕೃತಿಕವಾಗಿ ನಿಕಟವಾಗಿರುವ ಮ್ಯಾನ್ಮಾರ್‌ನಲ್ಲಿ ಶೇಕಡ 90ರಷ್ಟು ಮಂದಿ ಬೌದ್ಧ ಧರ್ಮಾವಲಂಬಿಗಳು. ಬರ್ಮೀಯರಲ್ಲಿ ಬೌದ್ಧಚಿಂತನೆಯೊಂದಿಗೆ ಸಹಜವಾಗಿಯೇ ಸರಳತೆ, ಸಜ್ಜನಶೀಲತೆ ಮೈಗೂಡಿದೆ. ಇಂತಹ ನೆಲದಲ್ಲಿ ಚೀನಾ ತನ್ನ ಆಕ್ರಮಣಕಾರಿ ನಡೆಯೊಂದಿಗೆ ಅಲ್ಲಿ ಎಲ್ಲವನ್ನೂ ಆಕ್ರಮಿಸಿ ಕುಳಿತಿದೆ. ಹೀಗಾಗಿ ಅಲ್ಲಿ ಸೇನಾಧಿಕಾರಿಗಳದೇ ಕಾರುಬಾರು. ಮಾನವಹಕ್ಕುಗಳ ಉಲ್ಲಂಘನೆ, ಪ್ರಜಾಸತ್ತೆಯ ಮೌಲ್ಯಗಳ ತುಚ್ಛೀಕರಣ ಸಾಮಾನ್ಯವಾಗಿದೆ. ಮ್ಯಾನ್ಮಾರ್‌ನಲ್ಲಿ ಮಾನವಹಕ್ಕುಗಳ ಉಲ್ಲಂಘನೆ ವಿರುದ್ಧ ನಿನ್ನೆ (ಶುಕ್ರವಾರ)ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಖಂಡಿಸುವ ನಿರ್ಣಯ ಕೈಗೊಂಡಾಗ ಭಾರತ ಅದರಿಂದ ದೂರ ಉಳಿಯಿತು. ಭಾರತವು ಮ್ಯಾನ್ಮಾರ್ ಪರ ನಿಲ್ಲಲು
ಹಿಂಜರಿಯುತ್ತಿರುವುದಾದರೂ ಏಕೆ ?

ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಮ್ಯಾನ್ಮಾರ್ ಬಗ್ಗೆ ವಿಶೇಷ ಪ್ರೀತಿ ಇತ್ತು ಎಂಬುದು ಅವರ ಬರಹಗಳಲ್ಲಿ ಕಂಡು ಬರುವ ಆ ನೆಲದ ಪ್ರಸ್ತಾಪಗಳಿಂದ ಗೊತ್ತಾಗುತ್ತದೆ. ಅರ್ಧ ಶತಮಾನದ ಹಿಂದೆ ತಾವು ಬರೆದ ‘ಏಕತೆಯ ಭಂಗ’ ಎಂಬ ಲೇಖನದಲ್ಲಿ ‘ಹಿಂದೂಸ್ತಾನ ಮತ್ತು ಪಾಕಿಸ್ತಾನಗಳ ನಡುವಣ ಏಕತೆಗಿಂತ ಹಿಂದೂಸ್ತಾನ ಮತ್ತು ಮ್ಯಾನ್ಮಾರ್ ನಡುವಣ ಏಕತೆಯೇ ಹೆಚ್ಚು.ಮ್ಯಾನ್ಮಾರನ್ನು ಭಾರತದಿಂದ ಪ್ರತ್ಯೇಕಿಸಿದಾಗ ವಿರೋಧಿಸದವರು ಸಾಮಾಜಿಕವಾಗಿ,ಅಧ್ಯಾತ್ಮಿಕ ನೆಲೆಯಲ್ಲಿ ಭಾರತಕ್ಕಿಂತ ಭಿನ್ನವೆನಿಸುವ ಪಾಕಿಸ್ತಾನ ಬೇರೆಯಾಗಿದ್ದಕ್ಕೆ ಕಿಡಿ ಕಾರುವುದೇಕೆ?’ ಎಂದು ಅವರು ಪ್ರಶ್ನಿಸಿದ್ದರು.ಅವರ ಪ್ರಕಾರ ಸಾಂಸ್ಕೃತಿಕ ನೆಲೆಯಲ್ಲಿ ಮ್ಯಾನ್ಮಾರ್ ಭಾರತದ ಜತೆಗೇ ಹೆಚ್ಚು ಆವಿನಾಭಾವತೆ ಹೊಂದಿದೆ. ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಜತೆಗೆ ಬೆರೆತುಕೊಂಡೇ ಬಂದ ಮ್ಯಾನ್ಮಾರ್ ಜನಜೀವನದಲ್ಲಿ ನಮ್ಮ ಬೌದ್ಧ ಧರ್ಮ ಹಾಸುಹೊಕ್ಕಾಗಿದೆ. ಅಲ್ಲಿನ ಒಟ್ಟು ಜನಸಂಖ್ಯೆಯ ಶೇಕಡ 90ರಷ್ಟು ಮಂದಿ ಬೌದ್ಧರೇ. ಹೀಗಾಗಿ ಅಲ್ಲಿನ ರಾಜಕಾರಣದ ಏಳುಬೀಳುಗಳನ್ನು ಬೌದ್ಧಧರ್ಮವನ್ನು ಹೊರತುಪಡಿಸಿ ನೋಡುವಂತೆಯೇ ಇಲ್ಲ.

ರಾಜಧಾನಿ ಯಾಂಗೂನ್‌ನಲ್ಲಿರುವ ಬೃಹದಾಕಾರದ ಬಂಗಾರಲೇಪಿತ ಶೈಡಗೋನ್ ಪಗೋಡವಂತೂ ಸಹಸ್ರಮಾನಗಳಿಂದ ಬಹಳಷ್ಟು ರಾಜಕೀಯ ಏಳುಬೀಳುಗಳನ್ನು ಕಂಡಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ಯಾಂಗೂನ್ ಪ್ರದೇಶದ ಇಬ್ಬರು ವರ್ತಕರು ಈಗಿನ ಬಿಹಾರ ಪ್ರದೇಶಕ್ಕೆ ಬಂದಿದ್ದಾಗ, ಬೌದ್ಧ ವಿಚಾರಧಾರೆಯಿಂದ ಪ್ರಭಾವಿತರಾಗಿ ಬುದ್ಧನ ಎಂಟು ಕೂದಲುಗಳನ್ನು ಪಡೆದುಕೊಂಡು ವಾಪಸಾದರು. ಅವರೇ ಕಟ್ಟಿದ ಶೈಡಗೋನ್ ಪಗೋಡದ ಸುತ್ತಲೂ ಯಾಂಗೂನ್ ಬೆಳೆಯುತ್ತಾ ಹೋಯಿತು. ಇದಾಗಿ ಶತಮಾನದ ನಂತರ ಅಶೋಕ ಚಕ್ರವರ್ತಿಯು ಬೌದ್ಧಬಿಕ್ಷುಗಳ ತಂಡವನ್ನು ಮ್ಯಾನ್ಮಾರ್‌ಗೆ ಕಳುಹಿಸುತ್ತಾರೆ. ಅವರ ಪ್ರಭಾವದಿಂದ ಆಗಿನ ಬಾಗನ್ ಅರಸರು ಬೌದ್ಧರಾಗುತ್ತಾರೆ. ಮ್ಯಾನ್ಮಾರ್‌ದಾದ್ಯಂತ ಬೌದ್ಧಬಿಕ್ಷುಗಳು ಸಂಚರಿಸುತ್ತಾರೆ. ಆ ನಾಡಿನಾದ್ಯಂತ ಜನ ಬೌದ್ಧ ವಿಚಾರಧಾರೆಯನ್ನು ಅಪ್ಪಿಕೊಳ್ಳುತ್ತಾರೆ. ಕಳೆದ ಎರಡು ಸಾವಿರ ವರ್ಷಗಳ ಅಲ್ಲಿನ ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಇತ್ಯಾದಿ ಎಲ್ಲದರಲ್ಲೂ ಬೌದ್ಧ ಪ್ರಭಾವವೇ ಎದ್ದು ಕಾಣುತ್ತದೆ.

ಆಂಗ್ ಸಾನ್ ಸೂಕಿಯಿಂದಾಗಿ ಪ್ರಸಕ್ತ ಮ್ಯಾನ್ಮಾರ್ ರಾಜಕಾರಣ ಹೊಸ ಆಯಾಮ ಪಡೆದುಕೊಂಡಿದೆ.ಸೂಕಿ ಮೇಲೆ ಬೌದ್ಧ ಚಿಂತನೆಯ ಪ್ರಭಾವವೇ ಹೆಚ್ಚು. ಪ್ರಜಾಸತ್ತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅವರು ತಮ್ಮ ಮೊದಲ ಭಾಷಣವನ್ನು ಶೈಡಗೋನ್ ಪಗೋಡದ ಆವರಣದಲ್ಲಿಯೇ ಮಾಡಿದ್ದರು.ಇವರ ತಂದೆ ಆಂಗ್‌ಸಾನ್ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಕಾಲಘಟ್ಟದಲ್ಲಿಯೇ ಮ್ಯಾನ್ಮಾರ್‌ನಿಂದಲೂ ಬ್ರಿಟಿಷರು ಕಾಲ್ಕಿತ್ತಿದ್ದರು. ಇನ್ನೇನು ಆಂಗ್‌ಸಾನ್ ನೇತೃತ್ವದ ಸರ್ಕಾರ ಮ್ಯಾನ್ಮಾರ್ ಇತಿಹಾಸಕ್ಕೆ ಹೊಸ ಭಾಷ್ಯ ಬರೆಯಲಿದೆ ಎನ್ನುತ್ತಿದ್ದಾಗಲೇ ಅವರ ಕಗ್ಗೊಲೆ ನಡೆಯಿತು.ಆಂಗ್‌ಸಾನ್ ಅಪ್ಪಟ ಬೌದ್ಧರಾಗಿದ್ದು, ಶೈಡಗೋನ್ ಪಗೋಡದ ಆವರಣದಲ್ಲಿನ ಅವರ ಭಾಷಣಗಳು ಆ ನಾಡಿನ ಜನರಲ್ಲಿ ಹೊಸ ಚಿಂತನೆಯ ಹೊಳೆ ಹರಿಸಿದ್ದವು. ಬ್ರಿಟಿಷರ ವಿರುದ್ಧ ಮ್ಯಾನ್ಮಾರ್‌ದಾದ್ಯಂತ 1936ರಲ್ಲಿ ನಡೆದಿದ್ದ ವಿದ್ಯಾರ್ಥಿ ಚಳವಳಿಗೆ ಶೈಡಗೋನ್ ಪಗೋಡದಲ್ಲಿಯೇ ಚಾಲನೆ ಸಿಕ್ಕಿತ್ತು. ಅಂದು ಆಂಗ್‌ಸಾನ್ ಬ್ರಿಟಿಷರ ವಿರುದ್ಧ ಸಂಘಟಿಸಿದ್ದ ವಿದ್ಯಾರ್ಥಿಗಳ ಹೋರಾಟ ಬ್ರಿಟಿಷರ ತೊಳ್ಳೆ ನಡುಗಿಸಿತ್ತು.

ಭಾರತದಲ್ಲಿ ತನ್ನ ಮೇಲೆ ನಡೆದ ನಿರಂತರ ದಾಳಿಯಿಂದಾಗಿ ಒಂದು ಸಾವಿರ ವರ್ಷದ ಹಿಂದೆಯೇ ಬೌದ್ಧಧರ್ಮ ಮಸುಕಾಗತೊಡಗಿತ್ತು. ಆದರೆ ಅದೇ ಸಂದರ್ಭದಲ್ಲಿ ಮ್ಯಾನ್ಮಾರ್‌ನಲ್ಲಿ ಬೌದ್ಧಧರ್ಮ ತನ್ನ ಆಳವಾದ ಬೇರುಗಳನ್ನಿಳಿಸಿ ಮುಗಿಲೆತ್ತರ ಬೆಳೆಯತೊಡಗಿತ್ತು. ಆ 250 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಪಾಗಾನ್ ಅರಸೊತ್ತಿಗೆ ಕಾಲದಲ್ಲಿ ಸಾವಿರಾರು ಪಗೋಡಗಳು, ಸ್ತೂಪಗಳು ನಿರ್ಮಾಣಗೊಂಡವು. ಮಂಗೋಲರ ದಾಳಿಯಿಂದ ಬೌದ್ಧರು ತೊಂದರೆಗೆ ಸಿಲುಕಿದರಾದರೂ, ನಂತರ ಕ್ರಮವಾಗಿ ಶಾನ್, ಟೊಂಗೊ, ಕೊನ್‌ಬಾಗ್ ಅರಸೊತ್ತಿಗೆಗಳು ಐದು ಶತಮಾನಗಳ ಕಾಲ ಆಳಿದವು. ಆಗ ಬೌದ್ಧರು ಚೇತರಿಕೆ ಕಂಡರು. ಸಹಸ್ರಮಾನದ ಎಲ್ಲಾ ಅರಸರು ಮತ್ತು ಜನರಿಗೆ ಭಾರತದ ಮುಖ್ಯವಾಹಿನಿಯೊಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ಸಂಬಂಧವಿದ್ದೇ ಇತ್ತು.

ಇನ್ನೂರು ವರ್ಷಗಳ ಹಿಂದೆ ಬ್ರಿಟಿಷರು ಮೊದಲಿಗೆ ಮ್ಯಾನ್ಮಾರ್‌ನಲ್ಲಿ ಕಾಲಿಟ್ಟು, ನಿರಂತರ ಕದನ ನಡೆಸಿ 1885ರಲ್ಲಿ ಇಡೀ ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಮೇಲಂತೂ ಕೋಲ್ಕತ್ತ ಮತ್ತು ದೆಹಲಿಯೊಂದಿಗೆ ಬರ್ಮಿಯರ ಸಂಬಂಧ ಹೆಚ್ಚಿತು. 1948ರಲ್ಲಿ ಬ್ರಿಟಿಷರು ಮ್ಯಾನ್ಮಾರ್ ತ್ಯಜಿಸಿದರು.

ಹೀಗೆ ಮ್ಯಾನ್ಮಾರ್ ಮತ್ತು ಭಾರತದ ಸ್ವತಂತ್ರಪೂರ್ವದ ಕಥೆಗಳಲ್ಲಿ ವ್ಯತ್ಯಾಸವೇನೂ ಇಲ್ಲ. ಆದರೆ ಸ್ವಾತಂತ್ರ್ಯಾನಂತರ ಮ್ಯಾನ್ಮಾರ್ ಆಡಳಿತಾತ್ಮಕವಾಗಿ ದಿಕ್ಕು ತಪ್ಪಿದರೆ, ಭಾರತ ಪ್ರಜಾಸತ್ತೆಯ ಹಾದಿಯಲ್ಲಿ ಸರಾಗವಾಗಿ ಸಾಗಿಬಂದಿದೆ.ಬ್ರಿಟಿಷರು ಮ್ಯಾನ್ಮಾರ್‌ನಲ್ಲಿ ಆಡಳಿತಕ್ಕೊಂದು ಸುವ್ಯವಸ್ಥೆಯ ಸ್ವರೂಪ ತಂದರಲ್ಲದೆ, ಕೃಷಿ ಪ್ರಧಾನವಾಗಿದ್ದ ಆರ್ಥಿಕತೆಯನ್ನು, ಕೃಷಿ ಉತ್ಪನ್ನಗಳ ರಫ್ತು ಪ್ರಧಾನ ಕ್ಷೇತ್ರವನ್ನಾಗಿ ರೂಪಾಂತರಿಸಿದ್ದರು. ಹೀಗಾಗಿಯೇ ಏಳು ದಶಕಗಳ ಹಿಂದೆಯೇ ಮ್ಯಾನ್ಮಾರ್ ಜಗತ್ತಿನಲ್ಲೇ ಅತ್ಯಧಿಕ ಅಕ್ಕಿ ರಫ್ತು ಮಾಡುತ್ತಿದ್ದ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಆ ಕಾಲದಲ್ಲಿ ಆಂಗ್ಲರು ಬೌದ್ಧರ ಮೇಲೆ ಸವಾರಿ ಮಾಡುವ ಧೈರ್ಯ ತೋರಲಿಲ್ಲವಾದರೂ, ಕ್ರೈಸ್ತ ಮಿಷನರಿಗಳ ಚಟುವಟಿಕೆ ಹೆಚ್ಚಿತು.ಆಗ ಅಸಮಾಧಾನಗೊಂಡ ಬೌದ್ಧರು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದರು. ಅದೇ ಸ್ವಾತಂತ್ರ್ಯ ಸಂಗ್ರಾಮದ ಭುಗಿಲಾಯಿತು. ಆಗ ಹುಟ್ಟು ಪಡೆದ ‘ಯಂಗ್‌ಮೆನ್ಸ್ ಬುದ್ದಿಸ್ಟ್ ಅಸೋಸಿಯೇಷನ್’ ಕಳೆದ ಶತಮಾನದ ಮೊದಲಾರ್ಧದಲ್ಲಿ ಸ್ವಾತಂತ್ರ ಹೋರಾಟದ ಮುಂಚೂಣಿಯಲ್ಲಿದ್ದರೆ, ಉತ್ತರಾರ್ಧದಲ್ಲಿ ಪ್ರಜಾಸತ್ತೆಯ ಉಳಿವಿಗಾಗಿ ಸತತ ಹೋರಾಟದಲ್ಲಿ ನಿರತವಾಗಿದೆ.

ಸ್ವಾತಂತ್ರ್ಯ ಸಿಗುತ್ತಿದ್ದಂತೆಯೇ ಆಗಿನ ಅಗ್ರನಾಯಕ, ಹೋರಾಟಗಾರ ಆಂಗ್‌ಸಾನ್ ಕೊಲೆಯಾದುದರಿಂದ ಯುನು ಮೊದಲ ಪ್ರಧಾನ ಮಂತ್ರಿಯಾದರು. ಸುಮಾರು ಒಂದು ದಶಕದ ಕಾಲ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಇವರು ಯಾಂಗೂನ್‌ನಲ್ಲಿ ವಿಶ್ವ ಬೌದ್ಧ ವಿಶ್ವವಿದ್ಯಾಲಯ ಆರಂಭಿಸಿದ್ದಲ್ಲದೆ, ಬೌದ್ಧರ ವ್ಯವಹಾರಗಳಿಗೇ ಪ್ರತ್ಯೇಕ ಸಚಿವಾಲಯ ರಚಿಸಿದರು. ಮೂಲತಃ ಬೌದ್ಧಶಾಸ್ತ್ರ ಪ್ರಾಧ್ಯಾಪಕರೇ ಆಗಿದ್ದ ಯುನು ಮೇಲೆ ಬರ್ಮೀಯರು ಅಪಾರ ನಂಬಿಕೆ ಇರಿಸಿಕೊಂಡಿದ್ದರಾದರೂ, ಯುನು ಆಡಳಿತದಲ್ಲಿ ನಿಯಂತ್ರಣವಿರಿಸಿಕೊಳ್ಳುವಲ್ಲಿ ವೈಫಲ್ಯ ಕಂಡರು.

ಶತಮಾನಗಳ ಹಿಂದೆಯೇ ಚೀನಾ ಅರಸರು ಹಲವು ಸಲ ಮ್ಯಾನ್ಮಾರ್ ಮೇಲೆ ವಿಫಲ ದಾಳಿ ನಡೆಸಿದ್ದರು. ಸ್ವಾತಂತ್ರ್ಯಾನಂತರ ಚೀನಾದ ಒಂದು ಕಣ್ಣು ಮ್ಯಾನ್ಮಾರ್ ಮೇಲೆ ಇದ್ದೇ ಇತ್ತು. ಯುನು ಐವತ್ತರ ದಶಕದ ಕೊನೆಯಲ್ಲಿ ಬೌದ್ಧಧರ್ಮವನ್ನು ರಾಷ್ಟ್ರೀಯ ಧರ್ಮ ಎಂದು ಘೋಷಿಸಿದೊಡನೆ, ಉತ್ತರ ಮ್ಯಾನ್ಮಾರ್‌ನ ಬೆಟ್ಟಸಾಲುಗಳಲ್ಲಿರುವ ಕಚಿನ್ ಬುಡಕಟ್ಟು ಜನರನ್ನು ಚೀನಾ ಎತ್ತಿಕಟ್ಟಿತು. ಚೀನಾ, ಮ್ಯಾನ್ಮಾರ್ ಮತ್ತು ಭಾರತದ ಗಡಿಭಾಗಗಳಲ್ಲಿರುವ ಬಹಳಷ್ಟು ಬುಡಕಟ್ಟು ಮಂದಿ ಶತಮಾನದ ಹಿಂದೆ ಕ್ರೈಸ್ತರಾಗಿದ್ದಾರೆ. ಬೌದ್ಧಧರ್ಮಕ್ಕೆ ಪ್ರಾಧಾನ್ಯತೆ ಕೊಟ್ಟದ್ದನ್ನು ವಿರೋಧಿಸಿದ ಕಚಿನ್‌ಗಳ ಕೈಗೆ ಚೀನಾದ ಶಸ್ತ್ರಾಸ್ತ್ರಗಳು ಬಂದವು.ಇವರ ವಿರುದ್ಧದ ಸಂಘರ್ಷಗಳಲ್ಲಿ ಜರ್ಜರಿತಗೊಂಡ ಯುನು ಸರ್ಕಾರ ಆಂತರಿಕ ಭದ್ರತೆಗಾಗಿ ಸೇನಾ ನೆರವು ಪಡೆಯಿತು.

ಇದರ ಲಾಭ ಪಡೆದ ಜನರಲ್ ನೆವಿನ್ 1962ರಲ್ಲಿ ಸೇನಾಕ್ರಾಂತಿ ನಡೆಸಿ ತಾವೇ ಅಧಿಕಾರದ ಗದ್ದುಗೆ ಏರಿದರು.ನೆವಿನ್ ಬಹುಸಂಖ್ಯಾತ ಬರಾಮ್ ಸಮುದಾಯಕ್ಕೆ ಸೇರಿದವರೆಂದು ಹೇಳಿಕೊಳ್ಳುತ್ತಿದ್ದರಾದರೂ, ಇವರ ಪೂರ್ವಜರು ಚೀನಾ ಮೂಲದವರೆಂದೇ (ಚೀನಿ ಬರ್ಮೀಯ) ಬಹಳಷ್ಟು ಮಂದಿ ನಂಬಿಕೊಂಡಿದ್ದಾರೆ. ಇವರು ಸಮಾಜವಾದಿ ಅರ್ಥವ್ಯವಸ್ಥೆಗೆ ಹೆಚ್ಚು ಒತ್ತು ನೀಡಿದರಾದರೂ, ಪ್ರಜಾಸತ್ತೆಯನ್ನು ಮೂಲೆಗುಂಪಾಗಿಸಿದರು.

ಇವತ್ತು ಮ್ಯಾನ್ಮಾರ್‌ನಲ್ಲಿ ‘ಚೀನಿ ಬರ್ಮೀಯ’ ಸಮುದಾಯ ಶೇ 3ರಷ್ಟಿದ್ದಾರೆನ್ನಲಾಗುತ್ತಿದೆ. ನೋಡಲು ಬರ್ಮೀಯರಂತೆ ಕಾಣುವ ಇವರು ಬರ್ಮೀ ಭಾಷೆಯನ್ನು ಕಲಿತು ನಿರರ್ಗಳವಾಗಿ ಮಾತನಾಡುತ್ತಾರೆ. 1990ರ ನಂತರವಂತೂ ಮ್ಯಾನ್ಮಾರ್‌ನ ಉತ್ತರದ ಚೀನಾ ಗಡಿ ಪ್ರದೇಶದಿಂದ ಸಹಸ್ರಾರು ಸಂಖ್ಯೆಯಲ್ಲಿ ಬಂದು ಮ್ಯಾನ್ಮಾರ್‌ನೊಳಗೆ ನೆಲೆಸಿಬಿಟ್ಟಿದ್ದಾರೆ.ಇವತ್ತು ಮ್ಯಾನ್ಮಾರ್‌ನ ಕೈಗಾರಿಕೆ, ಹಣಕಾಸು, ವಾಣಿಜ್ಯ ವಹಿವಾಟುಗಳೆಲ್ಲಾ ಈ ಸಮುದಾಯದವರ ಕೈಯಲ್ಲೇ ಇದೆ.ಈ ಸಮುದಾಯದಲ್ಲಿ ಬಹಳಷ್ಟು ಮಂದಿ ಉನ್ನತ ಶಿಕ್ಷಣ ಪಡೆದವರೇ ಆಗಿದ್ದು, ಇಂಗ್ಲಿಷ್ ಕರಗತ ಮಾಡಿಕೊಂಡು ಹೊರಜಗತ್ತಿನೊಂದಿಗೆ ವ್ಯವಹರಿಸಬಲ್ಲವರಾಗಿದ್ದಾರೆ.

ಇಂತಹ ಬೆಳವಣಿಗೆಗಳ ನಡುವೆ ಪ್ರಜಾಸತ್ತೆಗಾಗಿ ಎಂಬತ್ತರ ದಶಕದ ಆರಂಭದಲ್ಲಿ ಶುರುವಾದ ಜನಾಂದೋಲನ ದೇಶದಾದ್ಯಂತ ವ್ಯಾಪಕಗೊಂಡಿತು. ವಿದ್ಯಾರ್ಥಿ ಚಳವಳಿ ತಾರಕಕ್ಕೇರಿತು. ಆರ್ಥಿಕ ಸ್ಥಿತಿ ಹದಗೆಡತೊಡಗಿತು.ಆಗ ಸೇನೆ ಸಾವಿರಾರು ಪ್ರತಿಭಟನಾಕಾರರ ಹತ್ಯೆಗೈಯಿತು. ಆಗಲೇ ಸೂಕಿ ದೇಶದಾದ್ಯಂತ ಪ್ರವಾಸ ಮಾಡಿ ಭಾಷಣ ಮಾಡತೊಡಗಿದರು. ನೆವಿನ್ ಆಡಳಿತದಲ್ಲಿ ನಿಯಂತ್ರಣ ಕಳೆದುಕೊಳ್ಳತೊಡಗಿದರು. 1988ರ ಸೆಪ್ಟಂಬರ್‌ನಲ್ಲಿ ನೆವಿನ್ ಸರ್ಕಾರವನ್ನು ಕಿತ್ತೊಗೆದ ಸೇನಾಧಿಕಾರಿಗಳ ಗುಂಪೊಂದು ‘ರಾಜ್ಯ ಕಾನೂನು, ಸುವ್ಯವಸ್ಥೆ ಪುನರ್‌ಸ್ಥಾಪನೆ ಮಂಡಳಿ’ (ಎಸ್‌ಎಲ್‌ಒಆರ್‌ಸಿ) ಹೆಸರಲ್ಲಿ ಅಧಿಕಾರ ವಶ ಪಡಿಸಿಕೊಂಡಿತು.ಇವರ ದಬ್ಬಾಳಿಕೆಯಿಂದ ಮೂರು ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಸಾವನ್ನಪ್ಪಿದರು.

1990ರವರೆಗೆ ‘ಮಿಲಿಟರಿ ಕಾನೂನು’ ಜಾರಿಯಲ್ಲಿತ್ತು. 90ರಲ್ಲಿ ಸೇನಾಧಿಕಾರಿಗಳ ಗುಂಪು ಸಾರ್ವತ್ರಿಕ ಚುನಾವಣೆ ನಡೆಸಿತು.ಆಗ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ ನಿಚ್ಚಳ ಬಹುಮತ ಗಳಿಸಿತು. ಆದರೆ ಜನರ ತೀರ್ಪನ್ನು ತಿರಸ್ಕರಿಸಿದ ಸೇನಾಡಳಿತ ಸೂಕಿಯನ್ನು ಗೃಹಬಂಧನದಲ್ಲಿರಿಸಿತು. ಸೇನಾಡಳಿತಗಾರರು 1997ರಲ್ಲಿ ತಮ್ಮ ಗುಂಪಿನ ಹೆಸರನ್ನು ‘ರಾಜ್ಯ ಶಾಂತಿ ಮತ್ತು ಅಭಿವೃದ್ಧಿ ಮಂಡಳಿ’ (ಎಸ್‌ಪಿಡಿಸಿ) ಎಂದು ಬದಲಿಸಿಕೊಂಡರು. ಇದೀಗ ಸೇನಾಡಳಿತಗಾರರು ತಮ್ಮ ಮೂಗಿನ ನೇರಕ್ಕೇ ಮತ್ತೆ ಚುನಾವಣೆ ನಡೆಸಿದ್ದಾರೆ. ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ ಚುನಾವಣೆಯಿಂದ ದೂರ ಉಳಿದಿತ್ತು. ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ಇದೀಗ ಸೂಕಿ ಬಿಡುಗಡೆಯಾಗಿದೆ. ಇವರ ನೇತೃತ್ವದಲ್ಲಿ ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ ಹೋರಾಟ ಹೊಸ ಆಯಾಮ ಪಡೆದುಕೊಳ್ಳಲಿದೆ.

ಆದರೆ ಈಗಾಗಲೆ ಚೀನಾ ಸರ್ಕಾರ ಮ್ಯಾನ್ಮಾರ್‌ನಲ್ಲಿ ತನ್ನ ಸಂಪೂರ್ಣ ಹಿಡಿತ ಸಾಧಿಸಿದೆ. ಮ್ಯಾನ್ಮಾರ್‌ನ ನೌಕಾಪಡೆ, ಬಂದರುಗಳನ್ನು ಅಭಿವೃದ್ಧಿ ಪಡಿಸಿರುವ ಚೀನಾ ಅವುಗಳ ಮೇಲೆ ನಿಯಂತ್ರಣ ಪಡೆದಿದೆ. ಗೂಢಚರ್ಯೆ ಜಾಲಕ್ಕೆ ಸಂಬಂಧಿಸಿದ ಎಲ್ಲಾ ತಂತ್ರಜ್ಞಾನ, ಸಲಕರಣೆ ಚೀನಾದ್ದಾಗಿದೆ. ಅಲ್ಲಿನ ಸಿತ್ವೆ ನೌಕಾನೆಲೆಯನ್ನು ಕಟ್ಟಿರುವ ಚೀನಾ, ಈ ಮೂಲಕ ಬಂಗಾಳಕೊಲ್ಲಿಯ ಮೇಲೆ ತನ್ನ ಆಸ್ಥಿತ್ವವನ್ನು ಬಲಪಡಿಸಿಕೊಂಡಿದೆ.20ವರ್ಷಗಳ ಹಿಂದೆಯೇ ಮ್ಯಾನ್ಮಾರ್‌ನಲ್ಲಿ ಸೇನಾನೆಲೆ ಸ್ಥಾಪಿಸಿದ್ದ ಚೀನಾ ಇಂದು ಆ ದೇಶದ ಆರ್ಥಿಕತೆ, ಸೇನೆ ಮತ್ತು ಆಡಳಿತದ ಮೇಲೆ ಹಿಡಿತ ಸಾಧಿಸಿದೆ.

ಇಂತಹ ಸಂದಿಗ್ಧತೆಯಲ್ಲಿ ಬೌದ್ಧರು ಪ್ರಜಾಪ್ರಭುತ್ವದ ಪುನರ್‌ಸ್ಥಾಪನೆಗಾಗಿ ಹೋರಾಟವನ್ನು ಕೈಗೆತ್ತಿಕೊಂಡಿದ್ದಾರೆ.ಕೇವಲ ಮೂರು ವರ್ಷಗಳ ಹಿಂದೆ ಬೌದ್ಧರು ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟಾಗ ಬಂದೂಕಿನ ನೆರವಿನಿಂದ ಜನರನ್ನು ಚದುರಿಸಿದ್ದ ಸೇನೆ, ಪಗೋಡಗಳನ್ನು ಸುತ್ತುವರಿದಿತ್ತು. ಜನರೂ ಬೌದ್ಧಬಿಕ್ಷುಗಳೊಂದಿಗೆ ಕೈಜೋಡಿಸಿದ್ದರು.ಆಗ ಸಾವಿರಾರು ಬಿಕ್ಷುಗಳನ್ನು ಜೈಲಿಗೆ ತಳ್ಳಲಾಯಿತು. ನೂರಾರು ಜನ ಸತ್ತರು. ಅಂದು ವಿಶ್ವಸಂಸ್ಥೆಯಲ್ಲಿ ಇದರ ವಿರುದ್ಧ ಬಹಳಷ್ಟು ದೇಶಗಳು ಪ್ರತಿಭಟಿಸಿದ್ದವು.

ಇಂತಹದೊಂದು ಸಂಕ್ರಮಣ ಕಾಲಘಟ್ಟದಲ್ಲಿ ಸೂಕಿ ಪ್ರಜಾಪ್ರಭುತ್ವದ ಮರುಸ್ಥಾಪನೆಯ ಮಾತನಾಡುತ್ತಿದ್ದಾರೆ.ಸೇನಾಡಳಿತದ ಬೆನ್ನ ಹಿಂದಿರುವ ಬೃಹತ್ ‘ಶಕ್ತಿ’ಯ ಬಗ್ಗೆ ಅರಿವಿರುವುದರಿಂದಲೇ ಇದೀಗ ಸೂಕಿ ಅಹಿಂಸಾತ್ಮಕ ಹಾದಿಯ ಬಗ್ಗೆ ಮಾತನಾಡುತ್ತಿದ್ದಾರೆ.ಅವರ ಹಿಂದೆ ಸಹಸ್ರಾರು ಬೌದ್ಧರು ನಿಂತಿದ್ದಾರೆ.ಬೌದ್ಧಬಿಕ್ಷುಗಳು ತಮ್ಮ ಭಿಕ್ಷಾಪಾತ್ರೆಯನ್ನು ತಲೆಕೆಳಗಾಗಿ ಹಿಡಿದು ನಡೆಯುತ್ತಿದ್ದಾರೆ.ಇದೂ ಪ್ರತಿಭಟನೆಯ ಒಂದು ಪರಿ.ಬೌದ್ಧರಿಗೆ ಜಯ ಸಿಗಬಹುದೇ?______

Courtesy:

http://www.prajavani.net/Content/Nov202010/antarala20101119213742.asp