ರಾಜಕಾರಣಿಗಳ ಪಾಲಿನ ‘ಕಾಮಧೇನು’-ಗೋವು

02/12/2010
ದಿನೇಶ್ ಅಮಿನ್‌ಮಟ್ಟು

ರಾಜಕಾರಣಿಗಳ ಪಾಲಿನ ‘ಕಾಮಧೇನು’-ಗೋವು

ಹಸುಗಳ ಬಗ್ಗೆ ಈ ಜಗತ್ತಿನಲ್ಲಿ ಯಾರಿಗಾದರೂ ಮಾತನಾಡುವ ಹಕ್ಕಿದ್ದರೆ ಅದು ರೈತರಿಗೆ ಮಾತ್ರ. ಆ ಪ್ರಾಣಿಯನ್ನು ಕುಟುಂಬದ ಸದಸ್ಯರಂತೆ ಸಾಕಿ ಸಲಹುತ್ತಿರುವರು,

ಗೋವು ರಾಜಕೀಯದ ಹಳೆಯ ‘ಕಾಮಧೇನು’. ಲಾಲ್‌ಕೃಷ್ಣ ಅಡ್ವಾಣಿಯವರಿಂದ ಹಿಡಿದು ನರೇಂದ್ರ ಮೋದಿವರೆಗೆ, ಇಂದಿರಾ ಗಾಂಧಿಯವರಿಂದ ಹಿಡಿದು ದಿಗ್ವಿಜಯ್ ಸಿಂಗ್‌ವರೆಗೆ ಎಲ್ಲರೂ ರಾಜಕೀಯ ಲಾಭದ ಹಾಲು ಕರೆಯಲು ಬಡಹಸುವಿನ ಕೆಚ್ಚಲಿಗೆ ಕೈ ಹಾಕಿದವರೇ ಆಗಿದ್ದಾರೆ. ಈ ಪಟ್ಟಿಯಲ್ಲಿ ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. 

‘ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ರಕ್ಷಣೆ ಕಾಯಿದೆ 1964’ಕ್ಕೆ ತಿದ್ದುಪಡಿ ಮಾಡುವ ಮಸೂದೆಯೊಂದನ್ನು ರಾಜ್ಯ ಸರ್ಕಾರ ತಯಾರಿಸಿದೆ. ಇದಕ್ಕೆ ಗೋವಿನ ಬಗೆಗಿನ ಭಕ್ತಿ ಮತ್ತು ಕಾಳಜಿಯಷ್ಟೇ ಕಾರಣ ಎಂದು ಸರ್ಕಾರದಲ್ಲಿರುವ ನಿಜವಾದ ಗೋಭಕ್ತರ್ಯಾರೂ ಗೋವಿನ ಮೇಲೆ ಆಣೆ ಮಾಡಿ ಹೇಳಲಾರರು.

ಹಸುಗಳ ಬಗ್ಗೆ ಈ ಜಗತ್ತಿನಲ್ಲಿ ಯಾರಿಗಾದರೂ ಮಾತನಾಡುವ ಹಕ್ಕಿದ್ದರೆ ಅದು ರೈತರಿಗೆ ಮಾತ್ರ. ಆ ಪ್ರಾಣಿಯನ್ನು ಕುಟುಂಬದ ಸದಸ್ಯರಂತೆ ಸಾಕಿ ಸಲಹುತ್ತಿರುವರು, (ಎಷ್ಟೋ ರೈತರ ಮನೆಯೊಳಗೆ ದನದ ಕೊಟ್ಟಿಗೆ ಇದೆ) ಮತ್ತು ಆ ಮೂಕ ಪ್ರಾಣಿಯೊಡನೆ ನಿತ್ಯ ‘ಮಾತನಾಡುತ್ತಾ’ ಅದರ ಕಷ್ಟ-ಸುಖ ವಿಚಾರಿಸುತ್ತಿರುವವರು ಕೇವಲ ರೈತರು. ವಿಚಿತ್ರವೆಂದರೆ ರೈತರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹಸುಗಳ ಪ್ರಾಣ ಉಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ಕೆಲಸಕ್ಕೆ ಹೊರಟಿರುವ ರಾಜಕಾರಣಿಗಳು, ಸ್ವಾಮೀಜಿಗಳು, ಹಿಂದೂ ಧರ್ಮದ ಉದ್ಧಾರದ ಗುತ್ತಿಗೆ ಪಡೆದುಕೊಂಡಿರುವ ಸಮಾಜ ಸುಧಾರಕರಲ್ಲಿ ಯಾರೂ ಹಸು ಸಾಕಿದವರಲ್ಲ, ಅದರ ಸೆಗಣಿ ಎತ್ತಿದವರಲ್ಲ, ಗಂಜಳ ಬಾಚಿದವರಲ್ಲ, ಹುಲ್ಲು ಹಾಕಿದವರಲ್ಲ. ಇವರಲ್ಲಿ ಹೆಚ್ಚಿನವರು ಪ್ಯಾಕೆಟ್ ಹಾಲು ಕುಡಿದು ಗೋವಿನ ಚಿತ್ರಕ್ಕೆ ಪೂಜೆ ಮಾಡುವವರು. ವೈಯಕ್ತಿಕ ಲಾಭ-ನಷ್ಟದ ಲೆಕ್ಕಾಚಾರಕ್ಕೆ ತೊಡಗಿದಾಗೆಲ್ಲ ಇವರಿಗೆ ಗೋವಿನ ಬಗ್ಗೆ ಭಕ್ತಿ ಕೆರಳುತ್ತದೆ, ಕಾಳಜಿ ಉಕ್ಕಿ ಹರಿಯುತ್ತದೆ.

 

ಗೋಹತ್ಯೆ ನಿಷೇಧದ ಪರವಾಗಿ ವಕಾಲತ್ತು ವಹಿಸುತ್ತಿರುವವರೆಲ್ಲರೂ ಕೊಡುತ್ತಿರುವ ಕಾರಣ ಅದರ ಬಗ್ಗೆ ಹಿಂದೂಗಳಲ್ಲಿರುವ ಪೂಜ್ಯಭಾವನೆ. ಗೋವು ನಿಜಕ್ಕೂ ಹಿಂದೂಗಳ ಪಾಲಿಗೆ ಪೂಜನೀಯವೇ? ಹೌದು ಎಂದಾದರೆ ಅದು ಎಂದಿನಿಂದ ಹುಟ್ಟಿಕೊಂಡದ್ದು? ಹಿಂದೂ ಧರ್ಮ ಹುಟ್ಟಿಕೊಂಡ ದಿನದಿಂದಲೇ ಗೋವು ಪೂಜನೀಯವಾಗಿತ್ತೇ ಇಲ್ಲವೇ, ಯಾವುದೋ ಕಾಲಘಟ್ಟದಲ್ಲಿ ದಿಢೀರನೇ ಗೋವು ಪಾವಿತ್ರ್ಯದ ಪಟ್ಟ ಏರಿತೇ? ಈ ಪ್ರಶ್ನೆಗಳಿಗೆ ವೇದಗಳಲ್ಲಿಯೇ ಸ್ಪಷ್ಟವಾದ ಮತ್ತು ಯಾರೂ ನಿರಾಕರಿಸಲಾಗದಂತಹ ಉತ್ತರಗಳಿವೆ. ಆದರೆ ಹಿಂದೂ ಧರ್ಮದ ಆಚಾರ-ವಿಚಾರಗಳ ಬಗ್ಗೆ ಮಾತನಾಡುವಾಗೆಲ್ಲ ವೇದ-ಉಪನಿಷತ್‌ಗಳನ್ನು ಉಲ್ಲೇಖಿಸುವ ಪಂಡಿತರು ಗೋವಿನ ಪಾವಿತ್ರ್ಯದ ಬಗೆಗಿನ ಚರ್ಚೆ  ಎದುರಾದಾಗ ಮಾತ್ರ ಧರ್ಮಶಾಸ್ತ್ರಗಳನ್ನು ತಪ್ಪಿಯೂ ಪ್ರಸ್ತಾಪಿಸುವುದಿಲ್ಲ.

ಹಿಂದೂ ಧರ್ಮದ ‘ಸಂವಿಧಾನ’ ಎಂದೇ ಹೇಳಲಾಗುತ್ತಿರುವ ನಾಲ್ಕು ವೇದಗಳು ಆ ಕಾಲದ ಆಚಾರ, ವಿಚಾರ, ನಂಬಿಕೆ, ಜೀವನಕ್ರಮ, ಆಹಾರ ಪದ್ಧತಿಗಳ ವಿವರಗಳನ್ನೊಳಗೊಂಡ ಸಮಗ್ರರೂಪದ ದಾಖಲೆ. ಅವುಗಳ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರರು ಸೇರಿದಂತೆ ಆ ಕಾಲದ ಹಿಂದೂಗಳೆಲ್ಲರೂ ಮಾಂಸಾಹಾರಿಗಳಾಗಿದ್ದರು. ಹಸು ಮತ್ತು ಕುದುರೆ ಅವರ ಮೆಚ್ಚಿನ ಆಹಾರವಾಗಿತ್ತು. ಅಶ್ವಮೇಧ, ರಾಜಸೂಯ, ವಾಜಪೇಯ ಮೊದಲಾದ ಯಾಗಗಳಲ್ಲಿ ದನ, ಎತ್ತು, ಗೂಳಿಗಳನ್ನು ಬಲಿಕೊಡುವುದು ಮತ್ತು ಅದರ ನಂತರ ಅವುಗಳ ಮಾಂಸ ತಿನ್ನುವುದು ಸಾಮಾನ್ಯವಾಗಿತ್ತು. ಮದುವೆಯಿಂದ ಶ್ರಾದ್ಧದವರೆಗೆ ವಿಶೇಷ ಸಂದರ್ಭಗಳಲ್ಲಿ ‘ದನ ಕಡಿಯುವ’ ಪದ್ಧತಿ ಇತ್ತು. ಮನೆಗೆ ಬರುವ ಅತಿಥಿಗಳಿಗೆ ನೀಡುವ ಗೋಮಾಂಸದಿಂದ ಕೂಡಿದ ‘ಮಧುಪರ್ಕ’ (ಸೂಪ್?) ಎಂಬ ಪಾನೀಯ ನೀಡಲಾಗುತ್ತಿತ್ತು. ಇದರಿಂದಾಗಿಯೇ ಅತಿಥಿಗಳನ್ನು ‘ಗೋಘ್ನ’ (ಗೋವಿನ ಹತ್ಯೆಗೆ ಕಾರಣಕರ್ತರು) ಎಂದು ಕರೆಯುತ್ತಿದ್ದರಂತೆ.

ಈ ಬಗ್ಗೆ ಬರೆದು ಮುಗಿಯದಷ್ಟು ಉಲ್ಲೇಖಗಳು ವೇದಗಳು, ತೈತ್ತರೀಯ ಉಪನಿಷತ್, ಮನುಸ್ಮೃತಿ ಮಹಾಭಾರತ, ರಾಮಾಯಣಗಳಲ್ಲಿವೆ. ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ (‘ಹಿಂದೂಸ್ ಏಟ್ ಬೀಫ್’ ಕೃತಿ) ಅವರಿಂದ ಹಿಡಿದು ಅನೇಕ ಇತಿಹಾಸಕಾರರು, ವಿದ್ವಾಂಸರು ವೇದಗಳಕಾಲದಲ್ಲಿನ ಗೋಮಾಂಸ ಭಕ್ಷಣೆ ಬಗ್ಗೆ ವಿವರವಾಗಿ ಬರೆದಿದ್ದಾರೆ.

ಭಾರತರತ್ನ ಪ್ರಶಸ್ತಿ ಪಡೆದಿದ್ದ ಪುರಾತತ್ವ ಶಾಸ್ತ್ರಜ್ಞ ಪಿ.ವಿ.ಕಾಣೆ ತಾವು ಸಂಪಾದಿಸಿರುವ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ದಲ್ಲಿ, ಇತಿಹಾಸಕಾರ ಪ್ರೊ.ದ್ವಿಜೇಂದ್ರನಾಥ್ ಝಾ ಅವರ ‘ದಿ ಮಿತ್ ಆಫ್ ಹೋಲಿ ಕೌ’ ಎಂಬ ಪುಸ್ತಕದಲ್ಲಿ ವೇದ ಮತ್ತು ವೇದ ಪೂರ್ವ ಕಾಲದಲ್ಲಿ ಗೋಮಾಂಸ ಭಕ್ಷಣೆ ಹೇಗೆ ಸಾಮಾನ್ಯ ಆಹಾರ ಪದ್ಧತಿಯಾಗಿತ್ತು ಎಂಬುದನ್ನು  ಆಧಾರಸಹಿತ ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಘ ಪರಿವಾರಕ್ಕೆ ಹೆಚ್ಚು ಪ್ರಿಯರಾಗಿರುವ ಸಾಹಿತಿ ಎಸ್.ಎಲ್.ಭೈರಪ್ಪನವರು ‘ಪರ್ವ’ ಕಾದಂಬರಿಯಲ್ಲಿ ಇದನ್ನೇ ಬರೆದುದಕ್ಕೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. (ಧುರ್ಯೋಧನನು ರಾಯಭಾರಕ್ಕೆ ಕಳುಹಿಸುವ ಸೋಮದತ್ತನೆಂಬ ಪುರೋಹಿತರು ಮಧ್ಯಾಹ್ನದ ಭೋಜನಕ್ಕೆ ಕೋಣನ ಮಾಂಸ ತಿನ್ನುವ ಚಿತ್ರ ‘ಪರ್ವ’ದಲ್ಲಿದೆ).

ವೇದಕಾಲದಲ್ಲಿ ಮಾಂಸಾಹಾರಿಗಳಾಗಿದ್ದ ಹಿಂದೂಗಳು ಸಸ್ಯಾಹಾರಿಗಳಾಗಿದ್ದು ಮತ್ತು ಇದ್ದಕ್ಕಿದ್ದಂತೆಯೇ ಗೋವುಗಳು ಪವಿತ್ರಸ್ಥಾನ ಪಡೆದು ಪೂಜನೀಯವಾಗಿದ್ದು ಬೌದ್ಧ ಧರ್ಮದ ಸ್ಥಾಪನೆಯ ನಂತರ ಎನ್ನುವುದು ಚಾರಿತ್ರಿಕವಾದ ಸತ್ಯ. ಆದರೆ ಬಹಳ ಮಂದಿ ತಿಳಿದುಕೊಂಡಂತೆ ಬುದ್ಧ ಶಾಕಾಹಾರಿಯಾಗಿರಲಿಲ್ಲ, ಆತ ಮತ್ತು ಆತನ ಅನುಯಾಯಿಗಳು ಮಾಂಸ (ಅದೂ ಹಂದಿ) ತಿನ್ನುತ್ತಿದ್ದರು. ಅಹಿಂಸಾವಾದಿಯಾಗಿದ್ದ ಬುದ್ಧ ರೈತನ ಸಂಗಾತಿಯಾದ ಗೋವುಗಳ ಹತ್ಯೆಯನ್ನು ವಿರೋಧಿಸಿದ್ದ. ಬೌದ್ಧ ಧರ್ಮದ ಉದಯದಿಂದ ಭೀತಿಗೊಳಗಾದ ಹಿಂದೂಧರ್ಮ ಅದನ್ನು ಎದುರಿಸಲೆಂದೇ ಶಾಕಾಹಾರಿಯಾಗಿದ್ದು ಮತ್ತು ಗೋವನ್ನು ಪೂಜನೀಯವಾಗಿ ಮಾಡಿದ್ದು.

ಇಂತಹ ಗೋವು ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದ ‘ಕಾಮಧೇನು’ವಾಯಿತು. ಆಶ್ಚರ್ಯಕರ ಸಂಗತಿ ಎಂದರೆ ಈ ರಾಜಕೀಯ ಪ್ರಾರಂಭಿಸಿದ್ದೇ ಮೊಘಲ್ ದೊರೆಗಳು. ಬಾಬರ್, ಅಕ್ಬರ್, ಹುಮಾಯೂನ್ ಮೊದಲಾದವರೆಲ್ಲರೂ ಹಿಂದೂಗಳನ್ನು ಒಲಿಸಿಕೊಳ್ಳಲು ನಿಯಂತ್ರಿತ ಗೋಹತ್ಯೆ ನಿಷೇಧ ಹೇರಿದ್ದರು.

ಗೋಹತ್ಯೆ ನಿಷೇಧವನ್ನು ಮೂಲಭೂತ ಹಕ್ಕಾಗಿ ಸೇರಿಸಬೇಕೆಂದು ಸಂವಿಧಾನ ರಚನಾ ಸಭೆಯಲ್ಲಿ ಕೆಲವು ಹಿಂದೂ ನಾಯಕರು ಒತ್ತಡ ಹೇರಿದ್ದರು. ಆದರೆ ಅಂಬೇಡ್ಕರ್ ಮಾತ್ರವಲ್ಲ ಆಗಿನ ಪ್ರಧಾನಿ ಜವಾಹರಲಾಲ ನೆಹರೂ ಅವರೂ ಇದಕ್ಕೆ ವಿರುದ್ಧವಾಗಿದ್ದರು. ಈ ಕಾರಣದಿಂದಾಗಿಯೇ ಬಹಳ ಎಚ್ಚರಿಕೆಯಿಂದ 48ನೇ ಪರಿಚ್ಛೇದವನ್ನು ರಾಜ್ಯಗಳಿಗೆ ಸಂಬಂಧಿಸಿದ ಸಂವಿಧಾನದ ನಿರ್ದೇಶನ ತತ್ವದಲ್ಲಿ ಸೇರಿಸಲಾಯಿತು. ‘ಕೃಷಿಕ್ಷೇತ್ರ ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿಪಡಿಸಬೇಕು. ಜಾನುವಾರಗಳ ತಳಿ ಸುಧಾರಣೆಗೆ ಕ್ರಮಕೈಗೊಳ್ಳುವುದರ ಜತೆಗೆ ಪ್ರಯೋಜನಕಾರಿ ಜಾನುವಾರುಗಳು ಮುಖ್ಯವಾಗಿ ಹಾಲು ನೀಡುವಂತಹ ಹಸು-ಎಮ್ಮೆಗಳ ಹತ್ಯೆಗೆ ನಿಷೇಧ ಹೇರಬಹುದು’ ಎಂದು 48ನೇ ಪರಿಚ್ಛೇದ ಹೇಳಿದೆ. ಇದರಂತೆ ಪಶ್ಚಿಮ ಬಂಗಾಳ, ಕೇರಳ ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ನಿಯಂತ್ರಿತ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ.

ಕರ್ನಾಟಕದಲ್ಲಿ 1964ರಿಂದಲೂ ಗೋರಕ್ಷಣಾ ಕಾಯಿದೆ ಜಾರಿಯಲ್ಲಿದೆ. ಇದರ ಪ್ರಕಾರ ಸಂಬಂಧಿತ ಅಧಿಕಾರಿಗಳಿಂದ ಲಿಖಿತ ದೃಢೀಕರಣಪತ್ರ ಪಡೆದ ನಂತರವಷ್ಟೇ ಗೋವುಗಳ ಹತ್ಯೆಮಾಡಬಹುದಾಗಿದೆ. ಈ ರೀತಿ ಹತ್ಯೆ ಮಾಡಬಹುದಾದ ಗೋವುಗಳಿಗೆ ಕನಿಷ್ಠ ಹನ್ನೆರಡು ವರ್ಷ ವಯಸ್ಸಾಗಿರಬೇಕು, ಅವುಗಳು ಹಾಲು ನೀಡುವ ಇಲ್ಲವೇ ಕರು ಹಾಕುವ ಸಾಮರ್ಥ್ಯವನ್ನು ಕಳೆದುಕೊಂಡಿರಬೇಕು ಹಾಗೂ ಗಾಯಗೊಂಡು ನಿರುಪಯುಕ್ತವಾಗಿರಬೇಕು. ಉಳಿದೆಲ್ಲ ಕಾಯಿದೆಗಳಂತೆ ಇದರ ಉಲ್ಲಂಘನೆ ಕೂಡಾ ನಡೆಯುತ್ತಿರುವುದು ನಿಜ. ಮಾಂಸಕ್ಕಾಗಿ ಹಸುಗಳನ್ನು ಕಸಾಯಿಖಾನೆಗಳಿಗಿಂತ ಹೆಚ್ಚಾಗಿ ಖಾಸಗಿಯಾಗಿಯೇ ಕೊಲ್ಲುವುದರಿಂದ ಕಾಯಿದೆಯ ಪಾಲನೆ ಕಡಿಮೆ.

ಸಂಪೂರ್ಣವಾಗಿ ಗೋಹತ್ಯೆ ನಿಷೇಧಿಸುವ ಕಾನೂನು ರಚನೆ ಒತ್ತಾಯ ಸ್ವತಂತ್ರ ಭಾರತದಲ್ಲಿ ಜೋರಾಗಿ ಕೇಳಿಬಂದದ್ದು 1979ರಲ್ಲಿ ವಿನೋಬಾ ಭಾವೆ ಆಮರಣ ಉಪವಾಸ ಪ್ರಾರಂಭಿಸಿದಾಗ. ಇದಕ್ಕೆ ಮಣಿದ ಜನತಾ ಸರ್ಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. 1982ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರೇ ರಾಜ್ಯಸರ್ಕಾರಳಿಗೆ ಪತ್ರ ಬರೆದು ಗೋಹತ್ಯೆ ನಿಷೇಧಿಸುವಂತೆ ತಿಳಿಸಿದ್ದರು. ಅಲ್ಲಿಂದೀಚೆಗೆ ಗೋಹತ್ಯೆ ನಿಷೇಧದ ಕನಿಷ್ಠ ಹನ್ನೆರಡು ಖಾಸಗಿ ಸದಸ್ಯರ ಗೊತ್ತುವಳಿಗಳು ಲೋಕಸಭೆಯಲ್ಲಿ ಮಂಡನೆಯಾಗಿವೆ. 1990ರಲ್ಲಿ ಬಿಜೆಪಿ ಸದಸ್ಯ ಜಿ.ಎಂ.ಲೋಧಾ ಮಂಡಿಸಿದ ಗೊತ್ತುವಳಿಗೆ ಕಾಂಗ್ರೆಸ್ ನಾಯಕ ವಸಂತ ಸಾಠೆ ಅವರೇ ಬೆಂಬಲಿಸಿ ಅಚ್ಚರಿಸಿ ಹುಟ್ಟಿಸಿದ್ದರು.

ಬೂದಿ ಮುಚ್ಚಿದ ಕೆಂಡದಂತಿದ್ದ ಈ ವಿವಾದವನ್ನು ಇತ್ತೀಚೆಗೆ ಕೆದಕಿದ್ದು ಎಐಸಿಸಿಯ ಈಗಿನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಗೋಹತ್ಯೆ ನಿಷೇಧಿಸಿ ಕಾನೂನು ರೂಪಿಸುವಂತೆ ‘ದಿಗ್ಗಿರಾಜಾ’ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದರು. ಇದನ್ನೇ ಬಳಸಿಕೊಂಡ ಎನ್‌ಡಿಎ ಸರ್ಕಾರ 2003ರಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಮುಂದಾಯಿತು. ಆದರೆ ಮಿತ್ರಪಕ್ಷಗಳಾದ ತೆಲುಗುದೇಶಂ ಮತ್ತು ಡಿಎಂಕೆ ವಿರೋಧದ ಕಾರಣದಿಂದಾಗಿ ಆ ಪ್ರಯತ್ನ ಸಫಲವಾಗಲಿಲ್ಲ.

ಗೋಹತ್ಯೆ ನಿಷೇಧವನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನರಷ್ಟೇ ವಿರೋಧಿಸುತ್ತಾರೆಂಬ ತಪ್ಪು ಕಲ್ಪನೆಯೊಂದಿದೆ. ದನದ ಮಾಂಸವನ್ನು ನಿತ್ಯದ ಆಹಾರವಾಗಿ ಬಳಸುತ್ತಿರುವವರಲ್ಲಿ ಶೂದ್ರ ಮತ್ತು ದಲಿತರ ಸಂಖ್ಯೆ ಕೂಡಾ ಗಣನೀಯವಾಗಿದೆ. ಹೀಗಿದ್ದರೂ ಗೋಹತ್ಯೆಯ ನಿಷೇಧವನ್ನು ಕೇವಲ ಆಹಾರದ ದೃಷ್ಟಿಯಿಂದಷ್ಟೇ ವಿರೋಧಿಸಬೇಕಾಗಿಲ್ಲ. ಸಂಖ್ಯೆಯ ದೃಷ್ಟಿಯಿಂದ ವಿಶ್ವದಲ್ಲಿಯೇ ಅತಿಹೆಚ್ಚಿನ ಜಾನುವಾರು ಸಂಪತ್ತು ಹೊಂದಿರುವ ದೇಶ ಭಾರತ. ವಿಶ್ವದ ಒಟ್ಟು ಹಸುಗಳಲ್ಲಿ ನಾಲ್ಕನೆ ಒಂದರಷ್ಟು ನಮ್ಮ ದೇಶದಲ್ಲೇ ಇವೆ. ಇಲ್ಲಿರುವ ಸುಮಾರು 20 ಕೋಟಿ ಜಾನುವಾರುಗಳಲ್ಲಿ ಹಸುಗಳು ಆರು ಕೋಟಿ, ಎಮ್ಮೆಗಳು  ಎಂಟು ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದರೆ ಶೇಕಡಾ 60ರಷ್ಟು ಜಾನುವಾರುಗಳಿಗೆ ಬೇಕಾದಷ್ಟು ಮಾತ್ರ ಆಹಾರ ಲಭ್ಯ ಇದೆ. ಗೋಮಾಳಗಳೆಲ್ಲ ಒತ್ತುವರಿಗೊಳಗಾಗಿ ಕಣ್ಮರೆಯಾಗುತ್ತಿರುವುದರಿಂದ ಈ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಇದೆ. ಈವರೆಗಿನ ಎಲ್ಲ ಪಂಚವಾರ್ಷಿಕ ಯೋಜನೆಗಳ ವರದಿಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಕೃಷಿಕ್ಷೇತ್ರದಲ್ಲಿನ ಕಷ್ಟ-ನಷ್ಟ ತಾಳಲಾರದೆ ರೈತರು ಈಗಲೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇಂತಹವರ ಕುತ್ತಿಗೆಗೆ ಹಾಲು ಬತ್ತಿದ, ಕರು ಹಾಕದ, ರೋಗಿಷ್ಠ ಬಡಕಲು ಹಸುಗಳನ್ನು ಕಟ್ಟಿಹಾಕಿದರೆ ರೈತರ ಆತ್ಮಹತ್ಯೆಯ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಅಷ್ಟೇ.

ಗೋಹತ್ಯೆ ನಿಷೇಧಕ್ಕೆ ಕಾನೂನು ರಚಿಸಲು ಹೊರಟಿರುವ ಸರ್ಕಾರಕ್ಕೆ ಇವೆಲ್ಲ ಗೊತ್ತಿಲ್ಲ ಎಂದೇನಿಲ್ಲ. ಗೊತ್ತಿದ್ದೂ ಇಂತಹ  ‘ತಪ್ಪು’ ಮಾಡುತ್ತಿರುವುದಕ್ಕೆ ಕಾರಣ ಆಡಳಿತಪಕ್ಷದೊಳಗಿನ ಗುಪ್ತ ಅಜೆಂಡಾ. ಈಗಿರುವ ಕಾಯಿದೆಗೆ ಸೂಚಿಸಲಾಗಿರುವ ತಿದ್ದುಪಡಿಗಳಲ್ಲಿ ಗೋಹತ್ಯೆಯ ಪತ್ತೆಗಾಗಿ ಕಲ್ಪಿಸಿರುವ ಅವಕಾಶ ಹಾಗೂ ಅಪರಾಧಕ್ಕಾಗಿ ವಿಧಿಸಲಾಗುವ ಶಿಕ್ಷೆಯ ಪ್ರಮಾಣವೇ ಸರ್ಕಾರದ ದುರುದ್ದೇಶಕ್ಕೆ ಸಾಕ್ಷಿ.

ಈ ತಿದ್ದುಪಡಿ ಜಾರಿಗೆ ಬಂದರೆ ಮುಸ್ಲಿಮರನ್ನು ಒಳಗೊಂಡಂತೆ ರಾಜಕೀಯ ವಿರೋಧಿಗಳನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸುವುದು ಇನ್ನೂ ಸುಲಭದ ಕೆಲಸ. ಅವರ ಮನೆಮುಂದೆ ಸತ್ತದನದ ತಲೆ ಎಸೆದರಾಯಿತು. ಒಂದು ವರ್ಷದ ಜೈಲು ಇಲ್ಲವೇ 50,000 ರೂಪಾಯಿ ದಂಡ. ಮುಖ್ಯಮಂತ್ರಿ ಯಡಿಯೂರಪ್ಪನವರು ಎಷ್ಟು ಮಂದಿಯ ಕೈ ಕಡಿಯಲು ಸಾಧ್ಯ?

__________

Courtesy: http://www.prajavani.net/Content/Feb152010/dinesh20100214170320.asp

 

 


ಬೌದ್ಧ ಧರ್ಮಕ್ಕೆ 10,000 ದಲಿತರ ಮತಾಂತರ

09/07/2010

ಭೂಪಾಲ್, ಶನಿವಾರ, 11 ಅಕ್ಟೋಬರ್ 2008 ( 19:23 IST )
ಬುದ್ಧ ಜಯಂತಿಯ ದಿನವಾದ ಶುಕ್ರವಾರ ಮಧ್ಯಪ್ರದೇಶದ ಪುಕಾರಣ್ಯ ಗ್ರಾಮ ಸಮೀಪದ ಕಾನ್ಪುರದಲ್ಲಿ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಮಾತಾ ಪ್ರಸಾದ್, ಆಚಾರ್ಯ ಸಂದೇಶ್ ಭಾಲೆಕಾರ್ ಸೇರಿದಂತೆ ಹಲವು ಬೌದ್ಧ ಭಿಕ್ಷುಗಳ ಸಮ್ಮುಖದಲ್ಲಿ 10 ಸಾವಿರ ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು.

ಪುಕಾರಣ್ಯ ಗ್ರಾಮದ ಕಾನ್ಪುರದಲ್ಲಿ ನಡೆದ ಬೌದ್ಧ ಧರ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಈ ಮತಾಂತರ ಪ್ರಕ್ರಿಯೆ ನಡೆಯಿತು.ಇಂದಿನಿಂದ ನಾವು ಶ್ರೀರಾಮ ಸೇರಿದಂತೆ ಯಾವುದೇ ಹಿಂದೂ ದೇವ-ದೇವತೆಗಳನ್ನು ಪೂಜಿಸುವುದಿಲ್ಲ. ಆ ನಿಟ್ಟಿನಲ್ಲಿ ನಾವು ಕೇವಲ ಬುದ್ಧನ ತತ್ವಗಳನ್ನು ಮಾತ್ರ ಅನುಸರಿಸುತ್ತೇವೆ. ಇದು ನಮಗೆ ಮರುಜನ್ಮ ನೀಡಿದಂತಾಗಿದೆ ಎಂದು ರೂರಾ ಗ್ರಾಮದ ಶಾಕುಂತಲಾ ಕಮಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬೃಹತ್ ಸಮಾರಂಭದಲ್ಲಿ ಭಾರತೀಯ ದಲಿತ್ ಪ್ಯಾಂಥರ್ ಪಕ್ಷದ ಅಧ್ಯಕ್ಷ ಧಾನಿ ರಾವ್ ಅವರು ಭಾಗವಹಿಸಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನ, ವಿಚಾರಧಾರೆಯನ್ವಯ ಬೌದ್ಧ ದೀಕ್ಷೆ ಕಾರ್ಯಕ್ರಮ ನಡೆಸಲಾಗಿದೆ ಎಂದು ಹೇಳಿದರು.
(ಮೂಲ – ವೆಬ್‌ದುನಿಯಾ)


ಬೌದ್ಧ ಧರ್ಮ-ಅನಾವಶ್ಯಕ ವಿವಾದ: ಪೇಜಾವರ

08/07/2010
ಬೌದ್ಧ ಧರ್ಮ-ಅನಾವಶ್ಯಕ ವಿವಾದ: ಪೇಜಾವರ
ಹುಬ್ಬಳ್ಳಿ, ಶನಿವಾರ, 15 ನವೆಂಬರ್ 2008( 13:50 IST )

ದಲಿತರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಧರ್ಮಾಂತರಗೊಳ್ಳುವ ಕುರಿತಾಗಿ ತಮ್ಮ ಅನಿಸಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವಿವಾದ ಸೃಷ್ಟಿಸಲಾಗಿದೆ ಎಂದು ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮಿಜಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಕ್ತಿ ಸ್ವಯಂ ಇಚ್ಛೆಯಿಂದ ಯಾವುದೇ ಧರ್ಮ ಸ್ವೀಕಾರಕ್ಕೆ ಸಂವಿಧಾನ ಅವಕಾಶ ಕಲ್ಪಿಸಿರುವಾಗ ಒಂದು ಧರ್ಮದ ವಿರುದ್ಧ ತಾವು ಹೇಗೆ ಹೇಳಿಕೆ ನೀಡಲು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸೇರಬೇಡಿ ಎಂಬುದು ತಮ್ಮ ಅಭಿಪ್ರಾಯವಾಗಿತ್ತೇ ವಿನಃ ಅದು ಆದೇಶವಾಗಿರಲಿಲ್ಲ ಎಂದು ಅವರು ವಿವರಿಸಿದರು.

ಭಯೋತ್ಪಾದನೆ ಕೃತ್ಯಗಳಲ್ಲಿ ಕೆಲ ಮಠಾಧೀಶರು ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣ ವಿಚಾರಣೆಯಲ್ಲಿದೆ. ಅದರ ಕುರಿತು ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದರು.